ADVERTISEMENT

ಜೆಡಿಎಸ್‌ ಕೋರ್‌ ಕಮಿಟಿಯಿಂದ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ: ಜಿ.ಟಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 17:08 IST
Last Updated 10 ನವೆಂಬರ್ 2025, 17:08 IST
ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ   

ಮೈಸೂರು: ‘ಜೆಡಿಎಸ್‌ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ನನ್ನನ್ನು ಕೈಬಿಟ್ಟಿದ್ದಕ್ಕೆ ಯಾವುದೇ ಬೇಸರವಿಲ್ಲ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಪ್ರತಿಕ್ರಿಯಿಸಿದರು.

ಇಲ್ಲಿ ಸೋಮವಾರ ರಾತ್ರಿ ‍ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾನು ಜೆಡಿಎಸ್‌ನಲ್ಲೇ ಇದ್ದೇನೆ, ಇರುತ್ತೇನೆ’ ಎಂದರು.

‘ಎಚ್‌.ಡಿ. ಕುಮಾರಸ್ವಾಮಿ ಆರೋಗ್ಯ ಸರಿಪಡಿಸಿಕೊಂಡು ಜೆಡಿಎಸ್ ಕಟ್ಟಲು ಮುಂದಾಗಿದ್ದಾರೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕನನ್ನಾಗಿ ನೇಮಿಸದ ಕಾರಣದಿಂದ ನನಗೆ ಬೇಸರವಾಯಿತು. ಆ ನೋವಿನಿಂದಾಗಿ ಪಕ್ಷದ ಯಾವುದೇ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ. ಕೋರ್ ಕಮಿಟಿ ಅಧ್ಯಕ್ಷನನ್ನಾಗಿ ಮಾಡಿದ್ದಾಗ ಇಡೀ ರಾಜ್ಯ ಸುತ್ತಿ ಸಭೆ ನಡೆಸಿದ್ದೆ’ ಎಂದು ಹೇಳಿದರು.

ADVERTISEMENT

‘ನಾನು, ಸಿದ್ದರಾಮಯ್ಯ 25 ವರ್ಷ ಜೆಡಿಎಸ್ ಗಟ್ಟಿಯಾಗಿ ಕಟ್ಟಿದ್ದೇವೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಹೋದ ಮೇಲೆ ದೇವೇಗೌಡರ ಜೊತೆ ಪಕ್ಷ ಕಟ್ಟಿದ್ದೆ. ನಾನೀಗ ಆರ್ಥಿಕವಾಗಿ ಬಲಹೀನ ಆಗಿರುವುದು ಕುಮಾರಸ್ವಾಮಿಗೆ ಗೊತ್ತಾಗಿದೆ. ಅವರೀಗ ಕೇಂದ್ರ ಸಚಿವರು, ಶಕ್ತಿವಂತರಾಗಿದ್ದಾರೆ. ಯಾರೂ ಇರದೇ ಇದ್ದರೂ ಪಕ್ಷ ಕಟ್ಟುತ್ತೇನೆ ಎಂಬ ವಿಶ್ವಾಸ ಅವರಿಗೆ ಬಂದಿದೆ. ಮುಖ್ಯಮಂತ್ರಿ ಆಗುವ ಕನಸಿನೊಂದಿಗೆ ಪಕ್ಷ ಕಟ್ಟಲು ಹೊರಟ್ಟಿದ್ದಾರೆ, ಅವರಿಗೆ ಶುಭವಾಗಲಿ’ ಎಂದರು.

‘ನಾನು ದ್ವೇಷದ ರಾಜಕಾರಣ ಮಾಡಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.