ADVERTISEMENT

ಜೆಡಿಎಸ್‌: ಕೆಲವೆಡೆ ಅಭ್ಯರ್ಥಿ ಬದಲು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 19:31 IST
Last Updated 4 ಫೆಬ್ರುವರಿ 2023, 19:31 IST
   

ಬೆಂಗಳೂರು: ‘ಪಕ್ಷದ 93 ಅಭ್ಯರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಿದ್ದೇವೆ. ಘೋಷಿತ ಕ್ಷೇತ್ರಗಳ ಆರೇಳು ಅಭ್ಯರ್ಥಿಗಳನ್ನು ಬದಲಾವಣೆ ಮಾಡಲಾಗುತ್ತಿದ್ದು, ವಾರದಲ್ಲಿ 2ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಮೊದಲ ಪಟ್ಟಿಯಲ್ಲಿರುವ 93 ಅಭ್ಯರ್ಥಿಗಳ ಜತೆ ಶನಿವಾರ ಸಭೆ ನಡೆಸಿದ ಅವರು, ಇನ್ನಷ್ಟು ಶ್ರಮ ಹಾಕಿ ಕೆಲಸ ಮಾಡಲು ಸೂಚಿಸಿದರು.

61 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಪೂರ್ಣಗೊಂಡಿದೆ. ಮನೆ ಮನೆಗೂ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾ
ಗಿದ್ದು, ಈ ಕಾರ್ಯಕ್ರಮದ ಮೂಲಕ ಜನರ ಬಳಿಗೆ ತಲುಪಲು ಅಭ್ಯರ್ಥಿಗಳಿಗೆ ಗುರಿ ನೀಡಲಾಗಿದೆ. ಮುಂದಿನ ಎರಡೂವರೆ ತಿಂಗಳು ಅಭ್ಯರ್ಥಿಗಳು ವಾರಕ್ಕೆ ಮೂರು ದಿನ ಗ್ರಾಮ ವಾಸ್ತವ್ಯ ಮಾಡಲು ಸೂಚಿಸಲಾಗಿದೆ. ಪಕ್ಷದ ನಿರೀಕ್ಷೆಗಳಿಗೆ ತಲುಪದ ಅಭ್ಯರ್ಥಿಗಳ ಬದಲಾವಣೆ ಮಾಡುತ್ತೇವೆ ಎಂದರು.

ADVERTISEMENT

‘ಬಿಜೆಪಿ ನಾಯಕರು ವಿಜಯ ಸಂಕಲ್ಪ ಯಾತ್ರೆ ಬದಲು ‘ಸಿ.ಡಿ ಸಂಕಲ್ಪ ಯಾತ್ರೆ’ ಮಾಡಲಿ. ಆಗ ನಾನು ನವಗ್ರಹ ಅಂತ ಹೆಸರು ಬದಲಾಯಿಸುತ್ತೇನೆ. ಪಂಚರತ್ನ ರಥಯಾತ್ರೆ ವೇಳೆ ಪ್ರತಿನಿತ್ಯ ನೂರಾರು ಜನರ ಸಮಸ್ಯೆ ಆಲಿಸಿದ್ದೇನೆ. ನಿಮ್ಮ ಮನೆಯ ಮುಂದೆ ಬರುವವರು ಯಾರು ಅಂತ ಗೊತ್ತಿದೆ. ಬ್ಯಾಂಕ್‌ಗಳನ್ನು ಮುಳುಗಿಸಿದ ನಿಮ್ಮ ಸಹೋದರನ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧ ಹರಿಹಾಯ್ದರು.

ಜೆಡಿಎಸ್‌ ಮಿಷನ್ 123 ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು 140 ಗುರಿ ಇಟ್ಟುಕೊಂಡು ಹೋಗಿದ್ದಾರೆ. ಆ 140ರಲ್ಲಿ ಒಂದು ತೆಗೆದುಬಿಡಿ ಎಂದರು.

ಚಿತ್ತಾಪುರದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಸ್ವಯಂ ನಿವೃತ್ತರಾದ ಸುಭಾಷ್ ಚಂದ್ರ ರಾಥೋಡ್‌ ಅವರನ್ನು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಪಕ್ಷಕ್ಕೆ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.