ಮೈಸೂರು: ‘ಇತ್ತೀಚಿನ ದಿನಗಳಲ್ಲಿ ನ್ಯಾಯಮೂರ್ತಿಗಳಲ್ಲಿ ಮನುಸ್ಮೃತಿ ಸಂಸ್ಕೃತಿ ಹೆಚ್ಚಿದೆ. ಸಂವಿಧಾನವನ್ನು ತಾತ್ವಿಕವಾಗಿ ನೋಡದೇ, ತಾಂತ್ರಿಕವಾಗಿ ನೋಡುವುದನ್ನು ರೂಢಿ ಮಾಡಿಕೊಂಡಿದ್ದಾರೆ’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಸಮೈಕ್ಯ ಪಬ್ಲಿಕೇಷನ್ಸ್ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜೆಎಂಎಫ್ಸಿ ನ್ಯಾಯಾಲಯಗಳಿಂದ ಹಿಡಿದು ಸುಪ್ರೀಂ ಕೋರ್ಟ್ ವರೆಗೆ ಸಂವಿಧಾನವನ್ನು ತಾಂತ್ರಿಕವಾಗಿ ನೋಡುವುದನ್ನು ರೂಢಿ ಮಾಡಿಕೊಳ್ಳಲಾಗಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿರುವ ಭ್ರಾತೃತ್ವ, ಸಮಾನತೆ, ಸಾಮಾಜಿಕ ನ್ಯಾಯ, ಸಾರ್ವಭೌಮತ್ವ ಮುಂತಾದ ಪದಗಳನ್ನು ಉಲ್ಲೇಖಿಸಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಸಂವಿಧಾನದ ತಾತ್ವಿಕ ಅಂಶಗಳನ್ನು ಪಾಲಿಸುತ್ತಿಲ್ಲ’ ಎಂದರು.
‘ಈಚಿನ ದಿನಗಳಲ್ಲಿ ದೇಶದಲ್ಲಿ ಮನುವಿನ ಸಂವಿಧಾನವನ್ನು ಜಾರಿಗೊಳಿಸುವ ಪ್ರಯತ್ನಗಳು ಹೆಚ್ಚಿವೆ. ಪುರಿಯ ನಿಶ್ಚಿತಾನಂದ ಸ್ವಾಮೀಜಿ ಲಿಖಿತ ಸಂವಿಧಾನವನ್ನುತಿಪ್ಪೆಗೆ ಎಸೆಯಿರಿ ಎಂದಿದ್ದಾರೆ. ಇನ್ನೊಬ್ಬರು ನಾವು ಬಂದಿರುವುದೇ ಸಂವಿಧಾನವನ್ನು ಬದಲಿಸಲು ಎಂದಿದ್ದಾರೆ. ಕೆಲವರು ಜಂತರ್ ಮಂತರ್ನಲ್ಲಿ ಸಂವಿಧಾನವನ್ನು ಸುಟ್ಟುಹಾಕಿದ್ದಾರೆ. ಮನುವಿನ ಸಂವಿಧಾನ ಹಳಸಲು ಅನ್ನ. ಅಂಬೇಡ್ಕರ್ ಸಂವಿಧಾನ ಬಿಸಿ ಅನ್ನ. ನಮ್ಮ ಆಯ್ಕೆ ಬಿಸಿ ಅನ್ನವಾಗಿರಬೇಕು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.