ಬೆಂಗಳೂರು: ಕೊರೊನಾ ಭೀತಿಯಿಂದಾಗಿ ಬಡವರು, ಕೂಲಿಕಾರ್ಮಿಕರಿಗೆ ಕೆಲಸ ಇಲ್ಲದ ಸ್ಥಿತಿ ಇದ್ದು, ಅವರ ಆಹಾರಕ್ಕೆ ಕೊರತೆ ಆಗಬಾರದು ಎಂಬ ಕಾರಣಕ್ಕೆ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಏಪ್ರಿಲ್ 1ರಂದೇ ವಿತರಿಸಲಾಗುವುದು ಎಂದು
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಭಾನುವಾರ ಜನತಾ ಕರ್ಫ್ಯೂ ಇರುವುದರಿಂದ ನ್ಯಾಯಬೆಲೆ ಅಂಗಡಿಗಳೂ ಮುಚ್ಚಿರಲಿವೆ, ಆದರೆ ಸೋಮವಾರ ಮತ್ತು ಮಂಗಳವಾರ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಪಡಿತರ ವಿತರಿಸಲಾಗುವುದು ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಪಡಿತರ ಚೀಟಿದಾರರ ಯಾವುದೇ ಒಬ್ಬ ಸದಸ್ಯರ ಮೊಬೈಲ್ಗೆ ಒಟಿಪಿ ಬರಲಿದೆ. ಅದನ್ನು ಪಿಒಎಸ್ನಲ್ಲಿ ದಾಖಲಿಸಿ ಪಡಿತರ ನೀಡಲಾಗುವುದು ಎಂದರು. ಬುಧವಾರದಿಂದ ಎಪಿಎಂಸಿಯಲ್ಲಿ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿವಿತರಣೆ ಒಂದು ವಾರ ಸ್ಥಗಿತಗೊಳ್ಳಲಿದ್ದರೂ, ಪೂರೈಕೆಯಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದ ಅವರು, ಸಾಮಾನ್ಯ ಅಂಗಡಿಗಳಲ್ಲಿ ಸದ್ಯದ ಪರಿಸ್ಥಿತಿಯ ಲಾಭ ಪಡೆಯಲುಅಕ್ರಮ ದಾಸ್ತಾನು, ಅಧಿಕ ಬೆಲೆಗೆ ಮಾರಾಟ ಮಾಡುವ ದಂಧೆ ವಿರುದ್ಧ ನಿರಂತರ ದಾಳಿ, ದಂಡ ವಿಧಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.