ಬೆಂಗಳೂರು: ಅನುದಾನಿತ ಖಾಸಗಿ ಪ್ರೌಢಶಾಲೆಗಳಲ್ಲಿ ವಿವಿಧ ಕಾರಣಗಳಿಂದ ಖಾಲಿಯಾದ3633 ಬೋಧಕ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸರ್ಕಾರ ಆದೇಶ ಹೊರಡಿಸಿ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ.
ನಿವೃತ್ತಿ, ರಾಜೀನಾಮೆ, ಮರಣದಿಂದ ಖಾಲಿ ಉಳಿದಿರುವ ಹಾಗೂ ಪ್ರಾಧಿಕಾರದ ಅನುಮೋದನೆ ಪಡೆದು ಬಡ್ತಿ ಹೊಂದಿರುವುದು ಮತ್ತು ಇತರೆ ಕಾರಣಗಳಿಂದ ಬೋಧಕ ಹುದ್ದೆಗಳು ಭರ್ತಿಯಾಗದೆ ( ವೃತ್ತಿ, ಚಿತ್ರಕಲಾ, ಸಂಗೀತ ಸೇರಿದಂತೆ ವಿಶೇಷ ಶಿಕ್ಷಕರನ್ನು ಹೊರತುಪಡಿಸಿ) ಬಾಕಿ ಉಳಿದುಕೊಂಡಿವೆ.
ಈ ಕಾರಣದಿಂದ ಅನುದಾನಿತ ಶಾಲೆಗಳಲ್ಲಿ ಐದು ವರ್ಷಗಳಿಂದ ಫಲಿತಾಂಶ ನಿರೀಕ್ಷಿತ ಗುರಿ ಮುಟ್ಟುತ್ತಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮತ್ತು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ಕೊಟ್ಟು ಆರ್ಥಿಕ ಮಿತವ್ಯಯ ಸಡಿಲಿಸಿ, ಉತ್ತಮ ಫಲಿತಾಂಶಕ್ಕಾಗಿ ಕೆಲವು ಷರತ್ತುಗಳನ್ನು ವಿಧಿಸಿದೆ.
ಅನುದಾನಕ್ಕೊಳಪಟ್ಟಿರುವ ಶಾಲೆಯಲ್ಲಿ ಒಟ್ಟಾರೆ ಫಲಿತಾಂಶದ ಬದಲಿಗೆ ವಿಷಯವಾರು ಮತ್ತುಖಾಲಿ ಹುದ್ದೆಗೆ ಎದುರಾಗಿ ಶಿಕ್ಷಕರಿಗೆ ಸಂಬಂಧಪಟ್ಟ ವಿಷಯದಲ್ಲಿ ಶೇ 60ಕ್ಕಿಂತ ಕಡಿಮೆ ಬಂದರೆ, ಆ ವಿಷಯದ ಶಿಕ್ಷಕರನ್ನು ಗುರುತಿಸಿ ವಾರ್ಷಿಕ ವೇತನ ಬಡ್ತಿಯನ್ನು ತಡೆ ಹಿಡಿಯಲಾಗುತ್ತದೆ.ಇದೇ ರೀತಿ 3 ವರ್ಷಗಳ ಕಾಲ ಮುಂದುವರಿದರೆ ವೇತನಾನುದಾನವನ್ನು ತಡೆಹಿಡಿಯಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.
ಶಾಲೆಗಳಲ್ಲಿ ಐದು ವರ್ಷಗಳ ಕಾಲ ನಿರಂತರವಾಗಿ ಶೇ 50 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗದೇ ಹೋದರೆ, ಅಂತಹ ಶಾಲೆಯ ವೇತನಾನುದಾನಕ್ಕೆ ಕತ್ತರಿ ಬೀಳಲಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಈ ಎಲ್ಲ ಷರತ್ತುಗಳನ್ನು ಪೂರೈಸಿರುವ ಮತ್ತು ವಿಫಲವಾಗಿರುವ ಬಗ್ಗೆ ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು ವಿವರ ಸಲ್ಲಿಸಬೇಕು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.