ಬೆಂಗಳೂರು: ಭಾನುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ಇಂದಿರಾ ಗಾಂಧಿ ಭವನದ ಉದ್ಘಾಟನೆಗೆ ಆಗಮಿಸುವ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅವರು ರಸ್ತೆ ಬದಿಯಲ್ಲಿದ್ದ ನಂದಿನಿ ಬೂತ್ಗೆ ಭೇಟಿ ನೀಡಿ ನಂದಿನಿ ಉತ್ಪನ್ನಗಳನ್ನು ಖರೀದಿಸಿ ಸವಿದರು.
ಬಳಿಕ ಟ್ವಿಟರ್ನಲ್ಲಿ ಪೋಸ್ಟ್ ಒಂದನ್ನು ಹಾಕಿ 'ಕರ್ನಾಟಕದ ಹೆಮ್ಮೆ ನಂದಿನಿ ದಿ ಬೆಸ್ಟ್' ಎಂದು ಹೇಳಿದ್ದರು.
ಇದಕ್ಕೆ ರಾಹುಲ್ ಗಾಂಧಿ ಕಾಲೆಳೆದು ಟ್ವೀಟ್ ಮಾಡಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು, ‘ಸರ್ ನಿಮ್ಮ ಪೂರ್ವಜರ ಹೆಸರಲ್ಲಿ ಹುಟ್ಟಿಹಾಕಿರುವ ಬ್ರ್ಯಾಂಡ್ಗಳಿಗಿಂತ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ತಮಿಳುನಾಡಿನ ಆವಿನ್ ಹಾಗೂ ಕರ್ನಾಟಕದ ನಂದಿನಿ ಬ್ಯ್ರಾಂಡ್ಗಳು ಆತ್ಮನಿರ್ಭರ ಭಾರತ್ ಪರಿಕಲ್ಪನೆಯಲ್ಲಿ ಅಂತರರಾಷ್ಟ್ರೀಯ ಬ್ರಾಂಡ್ಗಳಾಗಿ ರೂಪಾಂತರಗೊಳ್ಳುತ್ತಿವೆ. ಅವುಗಳನ್ನು ಒಂದು ಸ್ಥಳಕ್ಕೆ ಸಿಮೀತ ಮಾಡಬೇಡಿ’ ಎಂಬ ಅರ್ಥದಲ್ಲಿ ತಿವಿದಿದ್ದಾರೆ.
ಗುಜರಾತ್ನ ಅಮುಲ್ ಹಾಲು ಮಾರಾಟಕ್ಕೆ ಕರ್ನಾಟಕದಲ್ಲಿ ಅವಕಾಶ ನೀಡಲಾಗುತ್ತಿದೆ. ಆ ಮೂಲಕ ನಂದಿನಿ ಹಾಲು ಮಾರಾಟಕ್ಕೆ ಅನಾನುಕೂಲ ಮಾಡಲಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಆರೋಪ ಮಾಡಿತ್ತು.
ಬಳಿಕ ಅಂತಹ ಯಾವುದೇ ಪ್ರಸ್ತಾವ ನಮ್ಮ ಮುಂದೆ ಇಲ್ಲ. ನಾವು ನಂದಿನಿಗೆ ಯಾವುದೇ ಪೈಪೋಟಿ ನೀಡುವುದಿಲ್ಲ ಎಂದು ಅಮಲ್ ಸ್ಪಷ್ಟನೆ ನೀಡಿತ್ತು. ಸದ್ಯ ನಂದಿನಿ ವಿಚಾರ ಕಾಂಗ್ರೆಸ್ಗೆ ಬಿಜೆಪಿ ವಿರುದ್ಧ ಪ್ರಮುಖ ರಾಜಕೀಯ ಅಸ್ತ್ರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.