ADVERTISEMENT

ಸಿದ್ದರಾಮಯ್ಯ ಕೆಟ್ಟ ಕನಸುಗಾರ: ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 12:04 IST
Last Updated 8 ಆಗಸ್ಟ್ 2021, 12:04 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಚಿತ್ರದುರ್ಗ: ದಲಿತರು ಮತ್ತು ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ್ದರಿಂದ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದ ಮೇಲೆ ಅವರಿಗೆ ಕೆಟ್ಟ ಕನಸು ಬೀಳುತ್ತಿವೆ. ದೇಶದಲ್ಲಿಯೇ ಅವರೊಬ್ಬ ಕೆಟ್ಟ ಕನಸುಗಾರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಟೀಕಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಉರುಳಿಸುವ ಅವರ ಕನಸು ನನಸಾಗದು. ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ ಮತ್ತೆಂದೂ ಮುಖ್ಯಮಂತ್ರಿ ಆಗುವುದಿಲ್ಲ’ ಎಂದು ಹೇಳಿದರು.

‘ಭಾರತಮಾತೆಗೆ ಬಿಜೆಪಿ ತಾಯಿ ಸ್ಥಾನ ನೀಡಿದೆ. ಸಿದ್ದರಾಮಯ್ಯ ಅವರಿಗೆ ತಾಯಿ, ತಂದೆ ಯಾರು ಎಂಬುದೇ ಗೊತ್ತಿಲ್ಲ. ಬಾದಾಮಿಯಲ್ಲಿ ಕಾಂಗ್ರೆಸ್‌ ಮಗ ಎಂದು ಹೇಳಿಕೊಂಡಿದ್ದರು. ಈಗ ಕಾಂಗ್ರೆಸ್‌ ಸೊಸೆ ಎಂದು ಒಪ್ಪಿಕೊಂಡಿದ್ದಾರೆ’ ಎಂದರು.

ADVERTISEMENT

‘ರಾಜ್ಯದ ಜನರ ಹಿತದೃಷ್ಟಿಯಿಂದ ಸರ್ಕಾರ ಕೆಲಸ ಮಾಡಲಿದೆ. ಇಂದಿರಾ ಕ್ಯಾಂಟೀನ್‌ ಹೆಸರನ್ನು ಸುಮ್ಮನೆ ಬದಲಿಸುವುದಿಲ್ಲ. ರಾಜೀಗಾಂಧಿ ಹೆಸರು ತೆಗೆದು ಧ್ಯಾನ್‌ಚಂದ್‌ ಹೆಸರು ಇಟ್ಟಿದ್ದೇವೆ. ಕಾಂಗ್ರೆಸ್‌ನವರು ಏನು ಮಾಡಿದರು’ ಎಂದು ಪ್ರಶ್ನಿಸಿದರು.

‘ಮೈಮುಟ್ಟಲಿ ನೋಡೋಣ’

‘ನಾವಾಗಿಯೇ ಯಾರಿಗೂ ಹಿಂಸೆ ನೀಡುವುದಿಲ್ಲ, ಕೊಲೆ ಮಾಡುವುದಿಲ್ಲ. ನಮ್ಮ ಉಸಾಬರಿ ಬಂದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಕೆ.ಎಸ್‌.ಈಶ್ವರಪ್ಪ ಎಚ್ಚರಿಕೆ ನೀಡಿದರು.

‘ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ದೇಶದಲ್ಲಿ ಈ ಹಿಂದೆ ಶಕ್ತಿ ಇರಲಿಲ್ಲ. ಕಾರ್ಯಕರ್ತರ ಕೊಲೆ ನಡೆದರೂ ಸಹಿಸಿಕೊಳ್ಳುವಂತೆ ನಾಯಕರು ಸೂಚನೆ ನೀಡಿದ್ದರು. ಈಗ ಇಡೀ ದೇಶದಲ್ಲಿ ಬೆಳೆದಿದ್ದೇವೆ. ಯಾವನಾದರೂ ಮೈಮುಟ್ಟಲಿ ನೋಡೋಣ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.