ಕಲಬುರಗಿ: ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆಯ ಮೊಬೈಲ್ ಸಂಖ್ಯೆಗೆ ‘ಸ್ವಿಚ್ಡ್ ಆಫ್’ ಕಾಲರ್ ಟ್ಯೂನ್ ಇಟ್ಟುಕೊಂಡ ‘ತುರ್ತು ಪರಿಹಾರ ತಂಡ’ದ ಎಂಜಿನಿಯರ್ ಅನಿಲ್ ಅವರನ್ನು ಅಮಾನತುಗೊಳಿಸಲು ಎಲ್ ಅಂಡ್ ಟಿ ಕಂಪನಿ ಪ್ರಧಾನ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.
ನಗರದ 37, 45, 44 ವಾರ್ಡ್ಗಳಿಗೆ ನೆಟ್ವರ್ಕ್ ಎಂಜಿನಿಯರ್ ಆಗಿದ್ದ ಅನಿಲ್ ಎಂಬುವವರು ತಮ್ಮ ಮೊಬೈಲ್ ಸಂಖ್ಯೆಗೆ ‘ಸ್ವಿಚ್ ಆಫ್’ ಎಂಬ ಕಾಲರ್ ಟ್ಯೂನ್ ಸೆಟ್ ಮಾಡಿಕೊಂಡಿದ್ದರು. ಸಾರ್ವಜನಿಕರ ಸಮಸ್ಯೆ ಕುರಿತು ‘ಪ್ರಜಾವಾಣಿ’ಯ ಗುರುವಾರದ ಸಂಚಿಕೆಯಲ್ಲಿ ‘ತುರ್ತು ಸ್ಪಂದನೆ ಮೊಬೈಲ್ ಸಂಖ್ಯೆಗೆ ‘ಸ್ವಿಚ್ಡ್ ಆಫ್’ ಟ್ಯೂನ್ ಇಟ್ಟ ಎಂಜಿನಿಯರ್’ ಶೀರ್ಷಿಕೆ ಅಡಿ ವರದಿ ಪ್ರಕಟಿಸಲಾಗಿತ್ತು.
ವರದಿಯನ್ನು ಆಧರಿಸಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್ಸಿ)ದ ಕುಸ್ಸೆಂಪ್ ಯೋಜನಾ ಅನುಷ್ಠಾನ ಘಟಕದ ಸೂಪರಿಂಟೆಂಡೆಂಟ್ ಎಂಜಿನಿಯರ್ ಆರ್.ಪಿ. ಜಾಧವ್ ಅವರು ಅಮಾನತಿಗೆ ಸೂಚಿಸಿದ್ದಾರೆ.
‘ವರದಿ ಕುರಿತು ಸಂಬಂಧಪಟ್ಟ ನೆಟ್ವರ್ಕ್ ಎಂಜಿನಿಯರ್ ಅನಿಲ್ ಅವರನ್ನು ವಿಚಾರಿಸಿದಾಗ, ತಮ್ಮ ಮೊಬೈಲ್ ಸಂಖ್ಯೆಗೆ ಸ್ವಿಚ್ಡ್ ಆಫ್ ಟ್ಯೂನ್ ಸೆಟ್ ಮಾಡಿಕೊಂಡಿದ್ದು ನಿಜವಿರುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ತುರ್ತು ಸ್ಪಂದನೆ ಮಾಡುವ ತಂಡವನ್ನು ರಚಿಸುವ ಉದ್ದೇಶ ಈಡೇರಿಲ್ಲ. ಅವರಿಗೆ ಕೊಟ್ಟ ಕೆಲಸದಲ್ಲಿ ಬೇಜವಾಬ್ದಾರಿತನವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅವರನ್ನು ಕೂಡಲೇ ಅಮಾನತುಗೊಳಿಸಿ ಇಂದೇ ವರದಿ ಸಲ್ಲಿಸಲು ಸೂಚಿಸಲಾಗಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಅನಿಲ್ ಸ್ಥಾನದಲ್ಲಿ ಬೇರೆ ಎಂಜಿನಿಯರ್ ನೇಮಿಸಿ ವಿವರವನ್ನು ಸಲ್ಲಿಸಬೇಕು. ನೀರು ಸರಬರಾಜು ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಂಜಿನಿಯರ್ಗಳು, ವಾಲ್ವ್ಮೆನ್ ಹಾಗೂ ಅಧಿಕಾರಿಗಳು ಸಾರ್ವಜನಿಕರ ದೂರವಾಣಿಗಳಿಗೆ ಸ್ಪಂದಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ವಹಿಸಿರುವ ಕಾರ್ಯದಲ್ಲಿ ಲೋಪದೋಷಗಳು ಕಂಡುಬಂದಲ್ಲಿ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.