ಡಾ. ಎಂ.ಎಸ್.ಲಠ್ಠೆ ವೇದಿಕೆ (ಕಲಬುರ್ಗಿ): 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಚಿಕ್ಕಮಗಳೂರಿನ ನಂದೀಶ ಬಂಕೇನಹಳ್ಳಿ ಅವರು ಪ್ರತಿಭಟನೆಯ ಸಂಕೇತವಾಗಿ ಬಲಗೈ ತೋಳಿಗೆ ಕಪ್ಪು ಪಟ್ಟಿ ಧರಿಸಿ, ಕವನ ವಾಚಿಸಿದರು.
ಕವನ ವಾಚಿಸಿದ 44 ಮಂದಿ ಪೈಕಿಯಲ್ಲಿ ಒಬ್ಬರಾದ ನಂದೀಶ ಅವರು 'ಅಪ್ಪ ಮತ್ತು ಕನ್ನಡ' ಶೀರ್ಷಿಕೆಯಡಿ ಕವನ ವಾಚಿಸಿದರು.
'ಶೃಂಗೇರಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರವು ಅನುದಾನ ತಡೆ ಹಿಡಿಯಿತು. ಅನುದಾನ ಬಿಡುಗಡೆ ಮಾಡುವಂತೆ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಒತ್ತಾಯಿಸಲಿಲ್ಲ. ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ಮತ್ತು ಪರಿಷತ್ತು ತೋರಿದ ಧೋರಣೆ ಖಂಡಿಸಿ ಕಪ್ಪುಪಟ್ಟಿ ಧರಿಸಿ, ಕವನ ವಾಚಿಸಿದೆ' ಎಂದು ನಂದೀಶ 'ಪ್ರಜಾವಾಣಿ'ಗೆ ತಿಳಿಸಿದರು.
'ಕವನ ವಾಚಿಸುವ ಮುನ್ನ ಕಪ್ಪು ಪಟ್ಟಿ ಧರಿಸಿರುವ ಕುರಿತು ಎಲ್ಲರಿಗೂ ಹೇಳಲು ಬಯಸಿದ್ದೆ. ಆದರೆ, ಕಾಲಾವಕಾಶ ಕಡಿಮೆಯಿದ್ದ ಕಾರಣ ಮತ್ತು ಆಯೋಜಕರು ಶೀರ್ಷಿಕೆ ಹೇಳಿ ನೇರವಾಗಿ ಕವನ ವಾಚಿಸುವಂತೆ ತಿಳಿಸಿದ್ದರಿಂದ ಪ್ರತಿಭಟನೆ ಬಗ್ಗೆ ಹೇಳಲು ಸಾಧ್ಯವಾಗಲಿಲ್ಲ. ಹೀಗಾಗಿ ನೇರವಾಗಿ ಕವನ ವಾಚಿಸಿದೆ' ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.