ADVERTISEMENT

‘ನನ್ನನ್ನು ಟೀಕಿಸಲು ಮೋದಿ ಬಳಿ ಏನೂ ಇಲ್ಲ’

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:56 IST
Last Updated 7 ಮಾರ್ಚ್ 2019, 19:56 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ನನ್ನ ಬಗ್ಗೆ ಟೀಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಬಳಿ ಏನೂ ಇಲ್ಲ. ಬಾಯಿ ಬಿಟ್ಟರೆ ನನ್ನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತ್ರ ಮಾತನಾಡಲು ಸಾಧ್ಯ. ಹಾಗಾಗಿ, ಏನನ್ನೂ ಮಾತನಾಡದೇ ಮರಳಿದ್ದಾರೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು.

‘ನನ್ನ ಬಗ್ಗೆ ಸುಳ್ಳು ಮಾತನಾಡಿದರೆ ಇಲ್ಲಿನ ಜನ ಹೇಗೆ ತಿರುಗೇಟು ಕೊಡುತ್ತಾರೆ ಎಂದು ಪ್ರಧಾನಿಗೆ ಗೊತ್ತಿದೆ. ಖರ್ಗೆ ಹೆಸರು ಕಿವಿಗೆ ಬಿದ್ದಾಕ್ಷಣ ಅಭಿವೃದ್ಧಿಯೇ ಜನರ ಕಣ್ಣ ಮುಂದೆ ಬರುತ್ತದೆ. ಆದ್ದರಿಂದ ಸುಮ್ಮನಿರದೇ ಬೇರೆ ದಾರಿ ಇಲ್ಲ. ಇದೂ ಕೂಡ ಅವರ ಚುನಾವಣಾ ತಂತ್ರಗಾರಿಕೆಯೇ’ ಎಂದು ಗುರುವಾರ ಹೇಳಿದರು.

‘ಪ್ರಧಾನಿಯೇ ಕಲಬುರ್ಗಿಗೆ ಬರುತ್ತಿದ್ದಾರೆ. ಕಲ್ಲಿನನಾಡನ್ನು ಚಿನ್ನದನಾಡು ಮಾಡಿಬಿಡುತ್ತಾರೋ ಏನೋ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದೆ. ಆದರೆ, ಬರಿಗೈಯಲ್ಲಿ ಬಂದು ಹಾಗೇ ಹೋಗಿದ್ದಾರೆ. ಇಷ್ಟಕ್ಕಾಗಿ ಇಲ್ಲಿಯವರೆಗೆ ಬರಬೇಕಿತ್ತೇ? ಐದು ವರ್ಷಗಳಲ್ಲಿ ಈ ಜಿಲ್ಲೆಗೆ ಮಾಡಿದ ಒಂದೇ ಒಂದು ಕೆಲಸವನ್ನಾದರೂ ಬಾಯಿಬಿಟ್ಟು ಹೇಳಬೇಕಿತ್ತು. ಏಕೆ ಹೇಳಲಿಲ್ಲ?’ ಎಂದು ಕೇಳಿದರು.

ADVERTISEMENT

‘ನನ್ನ ಕೊನೆ ಚುನಾವಣೆ ಅಲ್ಲ’

ಕಲಬುರ್ಗಿ: ‘ನನಗೆ ವಯಸ್ಸಾಗಿದೆ. ಇದೇ ಕೊನೆಯ ಚುನಾವಣೆ ಎಂದು ಬಹಳ ಜನ ಮಾತನಾಡುತ್ತಿದ್ದಾರೆ. ಆದರೆ, ನಾನು ಹುಟ್ಟು ಹೋರಾಟಗಾರ. ನನಗಿದು ಕೊನೆಯ ಚುನಾವಣೆ ಅಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

‘ನನ್ನನ್ನು ಸೋಲಿಸಲು ಮೋದಿ ಅವರಂಥ ಬಹಳ ಜನ ಕುತಂತ್ರ ನಡೆಸಿದ್ದಾರೆ. ಆದರೆ, ಸೋಲಿಸುವುದು ಅಥವಾ ಗೆಲ್ಲಿಸುವುದು ಕ್ಷೇತ್ರದ ಜನರ ಕೈಲಿದೆ ಹೊರತು; ಮೋದಿ ಕೈಲಿ ಇಲ್ಲ. ಇಂಥ ನೂರು ಮಂದಿ ಬಂದರೂ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂದು ದೃಢವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.