ಚಿಕ್ಕಬಳ್ಳಾಪುರ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಮುಂದಿನ ಮೂರೆವರೆ ವರ್ಷ ಸರ್ಕಾರ ಸುಭದ್ರವಾಗಿ ನಡೆಯಲಿದೆ. ಯಾರೂ ತಲೆ ಬಿಸಿ ಮಾಡಿಕೊಳ್ಳಬೇಕಾಗಿಲ್ಲ. ಒಂದು ತಿಂಗಳ ಹಿಂದೆ ಯಡಿಯೂರಪ್ಪ ಅವರ ಜತೆ ಮಾತನಾಡಿದ್ದೆ. ಆಗ ಅವರು ಮೂರುವರೆ ವರ್ಷ ಚೆನ್ನಾಗಿ ದೀನ ದುರ್ಬಲರ ಪರವಾಗಿ ಆಡಳಿತ ಮಾಡುತ್ತೇನೆ. ಆ ಮೇಲೆ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷ ಮತ್ತು ಜನ ಎಲ್ಲ ರೀತಿಯ ಜವಾಬ್ದಾರಿ, ಅಧಿಕಾರ ಕೊಟ್ಟಿದ್ದಾರೆ. ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು’ ಎಂದು ತಿಳಿಸಿದರು.
'ಹಿಂದೂ ಸಮಾಜ ಪ್ರತಿಷ್ಠಾಪಿಸಲೇ ಬೇಕು'
‘ಹಿಂದೂ ಧರ್ಮವೆಂದರೆ ಅದೊಂದು ಕೋಮುವಾದ, ಸಂಕುಚಿತ, ಸಮಾಜ ವಿಭಜಕ ಎಂದು ಬ್ರಿಟಿಷರು ಹೇಳುತ್ತ ಬಂದ ಗಿಳಿಪಾಠವನ್ನೇ ಕಾಂಗ್ರೆಸ್ನವರು ಮುಂದುವರಿಸಿಕೊಂಡು ಬಂದ ಪರಿಣಾಮ, ಇವತ್ತು ಹಿಂದೂ ಎಂದು ಹೇಳಿಕೊಳ್ಳಲು ಹಿಂದೂ ಸಮಾಜಕ್ಕೆ ಧೈರ್ಯವಿಲ್ಲ. ಅದನ್ನು ಮತ್ತೊಮ್ಮೆ ಪ್ರತಿಷ್ಠಾಪಿಸುವ ಕೆಲಸ ನಾವು ಮಾಡಲೇಬೇಕು’ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
‘ದುರ್ದೈವ ನಮ್ಮ ಶಾಲೆಗಳಲ್ಲಿ ನಮ್ಮ ಧರ್ಮದ ಬಗ್ಗೆ ಹೇಳುವ ವ್ಯವಸ್ಥೆ ಇಲ್ಲ. ಆದರೆ, ಮಸೀದಿಯಲ್ಲಿ ಕುರಾನ್, ಚರ್ಚ್ಗಳಲ್ಲಿ ಬೈಬಲ್ ಕುರಿತು ಹೇಳಿಕೊಡುತ್ತಾರೆ. ನಮ್ಮಲ್ಲಿ ದುರ್ದೈವದಿಂದ ದೇವಾಲಯಗಳು, ಮಠಗಳು ಕೂಡ ಆ ಕೆಲಸ ಮಾಡುತ್ತಿಲ್ಲ. ಮಠ–ಮಂದಿರಗಳು, ದೇವಾಲಯಗಳು, ಸನ್ಯಾಸಿಗಳು ಈ ಕಾರ್ಯ ಮಾಡಬೇಕು. ಈ ಮೂವರು ನಾವೆಲ್ಲ ಹಿಂದೂಗಳು ಎಂದು ಹೇಳುವ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾಳೆ ಜಾತ್ಯತೀತ ಎಂದು ಹೇಳುತ್ತ ಹೋದರೆಸನ್ಯಾಸಿಗೆ ಗೌರವ ಕೊಡುವವರು ಯಾರು? ದೇವಸ್ಥಾನಗಳು, ಮಠಗಳ ಬಗ್ಗೆ ಭಕ್ತಿ ನಿರ್ಮಾಣ ಮಾಡುವವರು ಯಾರು’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.