ಬೆಂಗಳೂರು: ಕಲ್ಯಾಣ ಕರ್ನಾಟಕದ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, ‘ಮಾನ್ಯ ಬಸವರಾಜ ಬೊಮ್ಮಾಯಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಆಚರಿಸಲು ತೆರಳಿದ್ದೀರಿ ಸಂತೋಷ. ಆ ಭಾಗಕ್ಕೆ ಹಿಂದುಳಿದ ಪ್ರದೇಶವೆಂಬ ಪಟ್ಟದಿಂದ ವಿಮೋಚನೆ ನೀಡುವ ಕೆಲಸಗಳನ್ನು ರಾಜ್ಯ ಸರ್ಕಾರ ಮಾಡದಿರುವುದೇಕೆ? ಅನುದಾನದಲ್ಲಿ, ಉದ್ಯೋಗದಲ್ಲಿ ನಿರಂತರ ಅನ್ಯಾಯ ಎಸಗುತ್ತಿರುವುದು ಏಕೆ’ ಎಂದು ಪ್ರಶ್ನಿಸಿದೆ.
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮಾತನಾಡಿದ್ದ ಬಿಜೆಪಿ ಸರ್ಕಾರ ಆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಆರ್ಟಿಕಲ್ 371ಜೆ ಕೋಶವನ್ನು ಕಲಬುರಗಿಗೆ ಸ್ಥಳಾಂತರವನ್ನೂ ಮಾಡಲಿಲ್ಲ. ಬಸವರಾಜ ಬೊಮ್ಮಾಯಿ ಅವರೇ, ಇಷ್ಟು ದಿನ ನಿರ್ಲಕ್ಷಿಸಿ ಈಗ ಅಲ್ಲಿ ನಿಂತು ನಿಮ್ಮ ಯಾವ ಸಾಧನೆ ಹೇಳಿಕೊಳ್ಳುತ್ತೀರಿ’ ಎಂದು ಕೇಳಿದೆ.
‘ಕಲ್ಯಾಣ ಕರ್ನಾಟಕಕ್ಕೆ ಎಲ್ಲಾ ಬಗೆಯಲ್ಲೂ ಅನ್ಯಾಯ ಮಾಡಿದೆ ಬಿಜೆಪಿ ಸರ್ಕಾರ ಎಂದು ಆ ಭಾಗದ ಸ್ವತಃ ಬಿಜೆಪಿ ಶಾಸಕರೇ ಆಕ್ರೋಶ ವ್ಯಕ್ತಪಡಿಸಿದ್ದರು. ಜನರ ಮಾತಲ್ಲ, ಕನಿಷ್ಠ ಅವರದೇ ಪಕ್ಷದ ಶಾಸಕರ ಮಾತನ್ನೂ ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಯಾವ ಮುಖ ಇಟ್ಟುಕೊಂಡು ಕಾಲಿಟ್ಟಿದ್ದೀರಿ ಮುಖ್ಯಮಂತ್ರಿಗಳೇ’ ಎಂದು ಟೀಕಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.