
ಕನ್ನಡ ಧ್ವಜ ಹಾಗೂ ಮುಖ್ಯಮಂತ್ರಿ ಯೋ
ವಾರಾಣಸಿ: ದೇಶದ ಹಲವು ಭಾಷೆಗಳಲ್ಲಿ ವೃತ್ತಿಪರ ಶಿಕ್ಷಣ ನೀಡುವ ಮಹತ್ವದ ಕ್ರಮವನ್ನು ಉತ್ತರ ಪ್ರದೇಶ ಸರ್ಕಾರ ಕೈಗೊಂಡಿದೆ.
ವಾರಾಣಸಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 'ಕಾಶಿ ತಮಿಳು ಸಂಗಮ 4.0' ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, 'ಉತ್ತರ ಪ್ರದೇಶ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿ ಪಡೆದು, ತಮಿಳು, ಕನ್ನಡ, ಮಲಯಾಳಂ, ತೆಲುಗು, ಮರಾಠಿ ಹಾಗೂ ಬಂಗಾಳಿ ಭಾಷೆಗಳನ್ನು ತನ್ನ ವೃತ್ತಿಪರ ಶಿಕ್ಷಣದಲ್ಲಿ ಸೇರಿಸಿದೆ' ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಸಾರವಾಗಿ ಈ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಸರ್ಕಾರ ಸಂಪೂರ್ಣ ವೆಚ್ಚ ಭರಿಸಲಿದೆ ಎಂದು ತಿಳಿಸಿದ್ದಾರೆ.
'ಕಾಶಿ ತಮಿಳು ಸಂಗಮ'ವನ್ನು 'ಒಂದೇ ಭಾರತ; ಶ್ರೇಷ್ಠ ಭಾರತ' ಸಂಕಲ್ಪವನ್ನು ಬಲಪಡಿಸುವ ದಿಟ್ಟ, ದೃಢ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ ಅವರು, ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಸಂಕೇತವಾಗಿದೆ ಎಂದೂ ಪ್ರತಿಪಾದಿಸಿದ್ದಾರೆ.
ಕಾಶಿ ಹಾಗೂ ತಮಿಳು ಸಂಪ್ರದಾಯದ ನಡುವಿನ ಪ್ರಾಚೀನ ಸಂಬಂಧದಲ್ಲಿ ಶಿವನ ಅಸ್ತಿತ್ವವಿದೆ. ಭಾರತದ ನಾಲ್ಕು ಮೂಲೆಗಳಲ್ಲಿ ಪವಿತ್ರ ಪೀಠಗಳನ್ನು ಸ್ಥಾಪಿಸುವ ಮೂಲಕ ಆ ಸಂಬಂಧವನ್ನು ಆದಿ ಗುರು ಶಂಕರಾಚಾರ್ಯರು ಬಲಪಡಿಸಿದ್ದಾರೆ ಎಂದು ಸ್ಮರಿಸಿದ್ದಾರೆ.
ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಕಾಶಿಯಲ್ಲಿ ವಿಶ್ವನಾಥ ಧಾಮವನ್ನು ನಿರ್ಮಿಸಿರುವುದು ದೇಶದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಪುನರುಜ್ಜೀವನಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 26 ಕೋಟಿಗೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ತಮಿಳುನಾಡಿನಿಂದ ಬರುತ್ತಿದ್ದಾರೆ ಎಂದು ಸಿಎಂ ಒತ್ತಿ ಹೇಳಿದ್ದಾರೆ.
ಉತ್ತರ ಪ್ರದೇಶದಿಂದ ಭಾರಿ ಸಂಖ್ಯೆಯ ಭಕ್ತರು ಪ್ರತಿ ವರ್ಷವೂ ರಾಮೇಶ್ವರಂ, ಮಧುರೈ, ಕನ್ಯಾಕುಮಾರಿಗೆ ಭೇಟಿ ನೀಡುತ್ತಾರೆ ಎಂದು ಒತ್ತಿಹೇಳಿದ ಯೋಗಿ, ರಿಯಾಯಿತಿ ದರದಲ್ಲಿ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಯಾತ್ರಿಗಳಿಗೆ ಅನಕೂಲವಾಗುವಂತೆ ಪ್ರವಾಸೋದ್ಯಮದ ಮೂಲಕ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದೂ ಇದೇ ವೇಳೆ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.