ADVERTISEMENT

ಸಂಬಳಕ್ಕೂ, ಉಂಬಳಕ್ಕೂ ಕನ್ನಡ: ಬಿಎಸ್‌ವೈ

ಆಯ್ಕೆ ಸಮಿತಿಯ ಸರ್ವಾನುಮತದ ತೀರ್ಮಾನದಂತೆಯೇ ಅರ್ಹರಿಗೆ ಪ್ರಶಸ್ತಿ ನೀಡಲಾಗಿದೆ: ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 19:21 IST
Last Updated 1 ನವೆಂಬರ್ 2019, 19:21 IST
   

ಬೆಂಗಳೂರು: ‘ಇಂಗ್ಲಿಷ್‌ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ಪ್ರಚಲಿತದಲ್ಲಿದೆ. ಆದರೆ ಕನ್ನಡವೇ ಸಂಬಳ, ಉಂಬಳಕ್ಕೂ ಆಗಬೇಕು ಎಂಬುದು ನನ್ನ ಅಪೇಕ್ಷೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶುಕ್ರವಾರ ಇಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಕನ್ನಡಿಗರಿಗೇ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ’ ಎಂದರು.

‘ವ್ಯಕ್ತಿಯೊಬ್ಬನ ಜತೆ ಅವನಿಗೆ ಅರ್ಥವಾಗುವ ಭಾಷೆಯಲ್ಲಿಮಾತನಾಡಿದರೆ ಅದು ಅವನ ಮೆದುಳು ತಲುಪುತ್ತದೆ. ನೀವು ಅವನದೇ ಆದ ಭಾಷೆಯಲ್ಲಿ ಮಾತನಾಡಿದರೆ ಅದು ಅವನ ಹೃದಯ ತಲುಪುತ್ತದೆ’ ಎಂಬ ದಕ್ಷಿಣ ಆಫ್ರಿಕಾದ ನೇತಾರ ನೆಲ್ಸನ್‌ ಮಂಡೇಲಾರ ಮಾತನ್ನು ಉಲ್ಲೇಖಿಸಿ, ಕನ್ನಡವನ್ನು ಉಳಿಸಿ, ಬೆಳೆಸುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದು ಸಲಹೆ ಮಾಡಿದರು.

ADVERTISEMENT

‘ಪ್ರಶಸ್ತಿಆಯ್ಕೆ ಸಮಿತಿಯ ಸರ್ವಾನುಮತದ ತೀರ್ಮಾನದಂತೆಯೇ ಅರ್ಹರಿಗೆ ಪ್ರಶಸ್ತಿ ನೀಡಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಶಸ್ತಿ ವಿಜೇತೆ ಯೋಗ ಪಟು ಖುಷಿ ಅವರ ಯೋಗ ಕಾರ್ಯಕ್ರಮದ ಮೂಲಕವೇ ಸಮಾರಂಭ ಆರಂಭವಾ
ಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್ ಅವರು ಮುಂದಿನ ದಿನಗಳಲ್ಲಿ ಯುವ ಸಾಧಕರಿಗೆ ಹೆಚ್ಚು ಪ್ರಶಸ್ತಿ ಸಿಗುವಂತಾಗಬೇಕು, ಜಗತ್ತಿನಲ್ಲಿ ಕನ್ನಡವನ್ನು ಕಟ್ಟಿ, ಬೆಳೆಸುವವರು ಅವರೇ ಎಂದರು. ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರು ಡೆಪ್ಯುಟಿ ಚೆನ್ನಬಸಪ್ಪ ಅವರು ತಮ್ಮ ಜಮೀನು ಮಾರಿ ವೀರಶೈವ ಹಾಸ್ಟೆಲ್‌ ಉಳಿಸಿದ ದೃಷ್ಟಾಂತವನ್ನು ತಿಳಿಸಿ, ನಾಡಿನಲ್ಲಿ ಇಂತಹ ಅದೆಷ್ಟೋ ಸಾಧಕರು ಇದ್ದಾರೆ ಎಂದರು. ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಥಳಾವಕಾಶ ಇಲ್ಲದೆ ನೂರಾರು ಜನ ಹೊರಗಡೆಯೇ ನಿಂತಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಅವರು, ಮುಂದಿನ ವರ್ಷ ಪ್ರಶಸ್ತಿ ಪ್ರದಾನವನ್ನು ಬೇರೆಡೆ, ವಿಶಾಲ ಪ್ರದೇಶದಲ್ಲಿ ಮಾಡುವುದಾಗಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.