ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮೂರು ವರ್ಷಗಳ ‘ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ’ ಪ್ರಶಸ್ತಿ ಘೋಷಿಸಿದ್ದು, ಒಂಬತ್ತು ಜಾನಪದ ಕಲಾವಿದರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಆಯ್ಕೆ ಸಮಿತಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿದೆ. 2020ನೇ ಸಾಲಿಗೆ ಮಂಡ್ಯದ ಲಾವಣಿ ಪದ ಕಲಾವಿದ ಆರ್.ಕೆ. ಸ್ವಾಮಿ, ಚನ್ನಪಟ್ಟಣದ ಡೊಳ್ಳುಕುಣಿತ ಕಲಾವಿದೆ ಲಕ್ಷ್ಮಿ ಶ್ರೀನಿವಾಸ್ ಹಾಗೂ ಶ್ರೀರಂಗಪಟ್ಟಣದ ನೀಲಗಾರರ ಪದ ಹಾಡುವ ಕಲಾವಿದ ಮಂಟೆ ಲಿಂಗಯ್ಯ ಆಯ್ಕೆಯಾಗಿದ್ದಾರೆ.
2021ನೇ ಸಾಲಿಗೆ ಮಳವಳ್ಳಿಯ ತಮಟೆ ಕಲಾವಿದ ಕುಂತೂರು ಕುಮಾರ, ಕೆ.ಆರ್. ಪೇಟೆಯ ಜಾನಪದ ಗಾಯಕಿ ಶಾಂತಮ್ಮ ಪಿ.ಆರ್. ಹಾಗೂ ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದ ತಮಟೆ ಕಲಾವಿದೆ ತಮಟೆ ನರಸಮ್ಮ ಭಾಜನರಾಗಿದ್ದಾರೆ.
2022ನೇ ಸಾಲಿಗೆ ಪಾಂಡವಪುರದ ಸೋಬಾನೆ ಪದ ಕಲಾವಿದೆ ಸೋಬಾನೆ ನಾಗಮ್ಮ, ಮಂಡ್ಯದ ಗಾಯಕಿ ಮಂಜುಳಾ ಆಲದಳ್ಳಿ ಹಾಗೂ ಕೊಳ್ಳೇಗಾಲದ ಕಂಸಾಳೆ ಕಲಾವಿದ ಎಂ. ಕೈಲಾಸಮೂರ್ತಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ತಲಾ ₹ 4 ಸಾವಿರ ನಗದು ಬಹುಮಾನ ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.