ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ಚುನಾವಣೆ ನಡೆಸುವ ಸಂಬಂಧ ಚುನಾವಣಾಧಿಕಾರಿಯನ್ನು ನೇಮಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಅವರು ಪತ್ರ ಬರೆದಿರುವ ಅವರು, ‘ಪರಿಷತ್ತಿನ ಅಧ್ಯಕ್ಷರ ಅವಧಿ, ಜಿಲ್ಲಾ ಮತ್ತು ಗಡಿನಾಡ ಘಟಕಗಳ ಅಧ್ಯಕ್ಷರ ಅವಧಿ ಮುಂಬರುವ ಮಾ.2ಕ್ಕೆ ಅಂತ್ಯವಾಗಲಿದೆ. ಮಾ.3ರೊಳಗೆ ಚುನಾವಣೆ ನಡೆದು, ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಬೇಕಿದೆ. ಪರಿಷತ್ತಿನ ಚುನಾವಣೆ ಉಪನಿಬಂಧನೆ 39ರ ಪ್ರಕಾರ ಚುನಾವಣೆಗೆ ಮೂರು ತಿಂಗಳ ಮೊದಲೇ ಸಹಾಯಕ ಕಮಿಷನರ್ ಹುದ್ದೆಗೆ ಕಡಿಮೆ ಇಲ್ಲದ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಬೇಕು’ ಎಂದು ಕೋರಿದ್ದಾರೆ.
‘ಉಪನಿಬಂಧನೆ 39ರ ಪ್ರಕಾರ ಚುನಾವಣಾ ದಿನಾಂಕ ನಿಗದಿಗೊಳಿಸಿ, ವೇಳಾಪಟ್ಟಿ ಪ್ರಕಟಿಸಬೇಕು. ಚುನಾವಣೆ ನಡೆಯುವ 90 ದಿನಗಳ ಮೊದಲು ಮತದಾರರ ಪಟ್ಟಿಯನ್ನು ಜಿಲ್ಲಾ ವಿಭಾಗಗಳಾಗಿ ವಿಂಗಡಿಸಿ, ಕೇಂದ್ರ ಪರಿಷತ್ತಿನ ಕಚೇರಿಯಲ್ಲಿ, ಜಿಲ್ಲಾ ಹಾಗೂ ಗಡಿನಾಡ ಘಟಕಗಳಲ್ಲಿ ಪ್ರಕಟಿಸಬೇಕು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.