ಬೆಂಗಳೂರು: ‘ದೇಶದ ಯಾವುದೇ ರಾಜ್ಯವಿರಲಿ ಅಲ್ಲಿನ ಸ್ಥಳೀಯ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲೇಬೇಕು. ಭಾಷೆಯ ಅನುಷ್ಠಾನದ ಪ್ರಸ್ತಾಪ ಬಂದರೆ ಕನ್ನಡವೇ ಸಾರ್ವಭೌಮ ಎಂಬ ನಿಲುವು ನನ್ನದು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹಾಗೂ ಕಾರ್ಯದರ್ಶಿ ಸಂತೋಷ ಹಾನಗಲ್ಲ ಅವರು ರಾಜ್ಯಪಾಲರನ್ನು ಬುಧವಾರ ಭೇಟಿ ಮಾಡಿ, ಪ್ರಾಧಿಕಾರದ ಪ್ರಮುಖ ಪ್ರಕಟಣೆಗಳು ಹಾಗೂ ಕಾರ್ಯಯೋಜನೆಗಳ ಅವಲೋಕನದ ಕೈಪಿಡಿಗಳನ್ನು ನೀಡಿದರು.
ರಾಜ್ಯದ ಆಡಳಿತದಲ್ಲಿ ಕನ್ನಡ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ ಟಿ.ಎಸ್. ನಾಗಾಭರಣ, ಕನ್ನಡಿಗರ ತಾರ್ಕಿಕ ಸಮಸ್ಯೆಗಳಾಗಿ ಉಳಿದಿರುವ ಉದ್ಯೋಗದಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆ, ಶಿಕ್ಷಣ ವಲಯದಲ್ಲಿ ಕಡ್ಡಾಯ ಕನ್ನಡ ಕಲಿಕಾ ಅಧಿನಿಯಮದ ಸಂಪೂರ್ಣ ಅನುಷ್ಠಾನ, ತಂತ್ರಜ್ಞಾನದಲ್ಲಿ ಕನ್ನಡ ತಂತ್ರಾಂಶಗಳ ಆವಿಷ್ಕಾರ ಮತ್ತು ಬಳಕೆ ಸೇರಿದಂತೆ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಇದೇ ವೇಳೆ ಕನ್ನಡದ ಅಸ್ಮಿತೆಯ ಉಳಿವಿಗೆ ಪ್ರಾಧಿಕಾರದ ಕಾರ್ಯಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಕೇಳಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಥಾವರಚಂದ್ ಗೆಹಲೋತ್ ಅವರು, ‘ಪ್ರಾಧಿಕಾರದ ಎಲ್ಲ ಕೆಲಸಗಳಿಗೆ ಸಹಕಾರ ಇರುತ್ತದೆ’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.