ADVERTISEMENT

ನಿವೃತ್ತ ಯೋಧರಿಗೆ ಸೌಲಭ್ಯ ನೀಡುವುದು ನಮ್ಮ ಕರ್ತವ್ಯ: ಸಿಎಂ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 9:12 IST
Last Updated 26 ಜುಲೈ 2021, 9:12 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ನಿವೃತ್ತ ಯೋಧರಿಗೆ ಹಾಗೂ ಯುದ್ಧದಿಂದ ಸಂತ್ರಸ್ತರಾದವರಿಗೆ ಸೌಲಭ್ಯಗಳನ್ನು ನೀಡಬೇಕಾದುದು ನಮ್ಮ ಕರ್ತವ್ಯ’ ಎಂದೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

22ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದ ಜವಾಹರಲಾಲ್ ನೆಹರು ತಾರಾಲಯದ ಮುಂಭಾಗದಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ಸೋಮವಾರ ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

‘ಕಾರ್ಗಿಲ್ ವಿಜಯ ದಿವಸದಲ್ಲಿ ಭಾಗವಹಿಸಿದ್ದು ಸಂತಸವಾಗಿದೆ. ವೀರ ಯೋಧರು ದೇಶ ರಕ್ಷಿಸಿದ ಮಹತ್ವದ ದಿನವಿದು. ಕಾರ್ಗಿಲ್ ಯುದ್ಧದಲ್ಲಿ ಮಡಿದ 527 ಹುತಾತ್ಮ ಯೋಧರನ್ನು ಸ್ಮರಿಸಿ ಅವರ ತ್ಯಾಗ, ಬಲಿದಾನಕ್ಕೆ ಕೃತಜ್ಞತೆ ಸಲ್ಲಿಸಬೇಕಾದ್ದು ನಮ್ಮ ಕರ್ತವ್ಯ’ ಎಂದರು.

ADVERTISEMENT

‘ಯೋಧರ ಕುಟುಂಬಗಳಿಗೆ ಅನುಗ್ರಹ ಪೂರ್ವಕ ಅನುದಾನ, ಉಚಿತ ನಿವೇಶನ, ಜಮೀನು, ಮನೆ ನಿರ್ಮಾಣಕ್ಕೆ ಅನುದಾನ, ಬಸ್ ಪಾಸ್, ಹೆಣ್ಣು ಮಕ್ಕಳ ಮದುವೆಗೆ ಧನ ಸಹಾಯ, ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಯೋಧರ ತ್ಯಾಗವನ್ನು ಈ ನಾಡು ಎಂದೆಂದಿಗೂ ಸ್ಮರಿಸುತ್ತದೆ’ ಎಂದೂ ಹೇಳಿದರು.

ಇದೇ ಸಂದರ್ಭದಲ್ಲಿ ಶಕುಂತಲ ಬಂಡಾರ್ಕರ್ ಬರೆದಿರುವ ಲೆ. ಕರ್ನಲ್ ಅಜಿತ್ ಬಂಡಾರ್ಕರ್ ಜೀವನ ಚರಿತ್ರೆಯ ಪುಸ್ತಕ ‘ದಿ ಸಾಗಾ ಆಫ್ ಅ ಬ್ರೇವ್ ಹಾರ್ಟ್’ ಬಿಡುಗಡೆಗೊಳಿಸಲಾಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.