ADVERTISEMENT

ಪಟ್ಟಾ ಭೂಮಿಯಲ್ಲಿ ಗ್ರಾನೈಟ್‌ ಗಣಿಗಾರಿಕೆಗೆ ಶಾಸಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 20:03 IST
Last Updated 13 ಮಾರ್ಚ್ 2020, 20:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಟ್ಟಾ ಭೂಮಿಯಲ್ಲಿ ಗ್ರಾನೈಟ್‌ ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಡಿ.ಎಸ್‌. ಹೊಲಗೇರಿ ಅವರ ಪ್ರಶ್ನೆಗೆ ಸಚಿವ ಸಿ.ಟಿ.ರವಿ ಉತ್ತರಿಸುವಾಗ ಇತರ ಶಾಸಕರೂ ಮಧ್ಯ ಪ್ರವೇಶಿಸಿ ಈ ಕುರಿತು ಸುದೀರ್ಘ ಚರ್ಚೆಗೆ ಒತ್ತಾಯಿಸಿದರು.

ಬಿಜೆಪಿಯ ದೊಡ್ಡನಗೌಡ ಮಾತನಾಡಿ, ‘ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ಪಟ್ಟಾ ಭೂಮಿಯಲ್ಲಿ ಗ್ರಾನೈಟ್‌ ನಿಕ್ಷೇಪ ಇದೆ. ಇವುಗಳ ಗಣಿಗಾರಿಕೆಗೆ ಗುತ್ತಿಗೆ ನೀಡಬೇಕು. ಲೈಸೆನ್ಸ್‌ಗೆ ಅರ್ಜಿ ಹಾಕಿದರೂ ಗಣಿ ಗುತ್ತಿಗೆ ನೀಡುತ್ತಿಲ್ಲ. ನೆರೆಯ ಆಂಧ್ರದಲ್ಲಿ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ ಅರ್ಜಿ ಸಲ್ಲಿಸಿದ 90 ದಿನಗಳಲ್ಲಿ ಗುತ್ತಿಗೆ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಅದೇ ಮಾದರಿಯಲ್ಲಿ ಅನುಮತಿ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ ಅವರೂ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬೇಕು ಮತ್ತು ಈ ಕುರಿತು ಹೆಚ್ಚಿನ ಚರ್ಚೆ ಆಗಬೇಕು ಎಂದರು.

ಗಣಿ ಸಚಿವ ಸಿ.ಸಿ.ಪಾಟೀಲ ಪರವಾಗಿ ಉತ್ತರ ನೀಡಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ರಾಜ್ಯದಲ್ಲಿ 470 ಗ್ರಾನೈಟ್‌ ಗಣಿ ಗುತ್ತಿಗೆ ನೀಡಲಾಗಿದೆ. ಈ ಪೈಕಿ 305 ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿವೆ. ಉಳಿದ 165 ನಿರ್ವಹಿಸುತ್ತಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.