ADVERTISEMENT

ಪಿಎಸ್‌ಐ, 40 ಪರ್ಸೆಂಟ್, ಸಂತೋಷ ಪಾಟೀಲ ಪ್ರಕರಣವನ್ನೂ ಎನ್‌ಐಎಗೆ ಕೊಡಿ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2022, 10:14 IST
Last Updated 29 ಜುಲೈ 2022, 10:14 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಪ್ರವೀಣ್ ಹತ್ಯೆ ಪ್ರಕರಣವನ್ನ ಎನ್‌ಐಎಗೆ ವಹಿಸುವ ಮೂಲಕ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ತನ್ನ ಅಸಾಮರ್ಥ್ಯವನ್ನ ಬೇಷರತ್ತಾಗಿ ಒಪ್ಪಿಕೊಂಡಿದೆ. ಬೊಮ್ಮಾಯಿ ಅವರೇ, ಯಾವ ತನಿಖೆಯೂ ನಿಮ್ಮಿಂದ ಸಾಧ್ಯವಾಗದು’ ಎಂದು ಟೀಕಿಸಿದೆ.

‘ಪಿಎಸ್‌ಐ ಹಗರಣ, 40 ಪರ್ಸೆಂಟ್‌ ಕಮಿಷನ್ ಹಗರಣ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸೇರಿದಂತೆ ಎಲ್ಲವನ್ನೂ ಇದೇ ರೀತಿ ಸ್ವತಂತ್ರ ತನಿಖೆಗೆ ವಹಿಸಿ’ ಎಂದು ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್‌ ಒತ್ತಾಯಿಸಿದೆ.

ADVERTISEMENT

‘ಬೊಮ್ಮಾಯಿ ಅವರೇ, ನಿಮ್ಮ ವೈಫಲ್ಯಕ್ಕೆ ವಿರೋಧ ಪಕ್ಷಗಳು ಕನ್ನಡಿ ಹಿಡಿಯುವುದು ತಪ್ಪು ಎಂಬಂತೆ ವರ್ತಿಸಿದ ಪರಿಣಾಮ ಇಂದು ನಿಮ್ಮದೇ ಕಾರ್ಯಕರ್ತರು ಚೀ ಥು ಎನ್ನುತ್ತಿದ್ದಾರೆ. ಆದರೂ ನಿಮ್ಮ ಸೊಕ್ಕು ಕಮ್ಮಿಯಾಗದೆ ವಿಪಕ್ಷ ನಾಯಕರ ವಿರುದ್ಧ ಏಕವಚನ ಪ್ರಯೋಗಿಸಿದ್ದೀರಿ. ನಿಮಗೆ ಸಿಎಂ ಹುದ್ದೆಯ ಯೋಗ ಬಂದಿರಬಹುದು ಯೋಗ್ಯತೆ ಬಂದಿಲ್ಲ’ ಎಂದು ವಾಗ್ದಾಳಿ ನಡೆಸಿದೆ.

'ಬೊಮ್ಮಾಯಿ ಅವರೇ, ಎಲ್ಲಿ ನಿಮ್ಮ ರಾಜಧರ್ಮ? ನೀವು ಇಡೀ ರಾಜ್ಯದ ಜನತೆಯ ಮುಖ್ಯಮಂತ್ರಿಯೇ? ಅಥವಾ ನಿಮ್ಮ ಪಕ್ಷದ, ನಿಮ್ಮ ಸಮುದಾಯದ, ಯಾವುದೇ ಒಂದು ಧರ್ಮದ ಮುಖ್ಯಮಂತ್ರಿಯೇ? ಹತ್ಯೆಯಾದವರೆಲ್ಲರೂ ಕರ್ನಾಟಕದ ಪ್ರಜೆಗಳಲ್ಲವೇ, ಅವರೆಲ್ಲರ ಹತ್ಯೆಗೂ ನಿಮ್ಮ ಸರ್ಕಾರದ ವೈಫಲ್ಯವೇ ಕಾರಣವಲ್ಲವೇ? ಮತ್ತೇಕೆ ತಾರತಮ್ಯ?’ ಎಂದು ಪ್ರಶ್ನಿಸಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.