ಬೆಂಗಳೂರು: ‘ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್ ಘಟಕದ ಐಟಿ ಸೆಲ್ನ ಕಾರ್ಯದರ್ಶಿಯಾಗಿ ನೇಮಕವಾದ ಶೈಲಜಾ ಅಮರನಾಥ್ ಎಂಬುವವರು ರಾಮಾಯಣ, ಸೀತೆ ಹಾಗೂ ರಾಮನಿಗೆ ಅವಮಾನ ಮಾಡಿದ್ದಾರೆ’ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಈ ಕುರಿತು ಬಿಜೆಪಿ ಟ್ವೀಟ್ ಮಾಡಿ‘ರಾಮ, ಸೀತೆ ಹಾಗೂ ರಾಮಾಯಣದ ಬಗ್ಗೆ ನಿಮಗೆ ಗೌರವವಿದ್ದರೆಶೈಲಜಾ ಅಮರನಾಥ್ ಮೇಲೆ ಕೂಡಲೇ ಕ್ರಮ ಕೈಗೊಳ್ಳಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಆಗ್ರಹಿಸಿದೆ.
ಶೈಲಜಾ ಅಮರನಾಥ್ ಹಾಗೂ ಸಂಗಡಿಗರು ಕ್ಲಬ್ ಹೌಸ್ ಮೊಬೈಲ್ ಆ್ಯಪ್ನಲ್ಲಿ ಹಿಂದೂಗಳ ಭಾವನೆಗಳಿಗೆಅವಮಾನ ಮಾಡಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ ಆಡಿಯೊ ಕ್ಲಿಪ್ನ್ನು ಬಿಜೆಪಿ ಟ್ವೀಟ್ನಲ್ಲಿ ಉಲ್ಲೇಖಿಸಿದೆ.
‘ಡಿಕೆಶಿ ಅವರೇ, ನೀವು ಕೂಡಾ ಸಿದ್ದರಾಮಯ್ಯ ಜಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದೀರಾ? ಹಿಂದೂ ದೇವ- ದೇವತೆ, ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್ಗೆ ಆಶ್ರಯ ನೀಡುವ ಮೂಲಕ ನಿಮ್ಮ ಅಂತರಾಳದಲ್ಲಿ ಇರುವ ಹಿಂದು ವಿರೋಧಿ ನೀತಿಯನ್ನು ಈಗ ಬಹಿರಂಗಪಡಿಸಿದ್ದೀರಿ. ಸಿದ್ದರಾಮಯ್ಯ ಒಬ್ಬ ಹಿಂದು ವಿರೋಧಿ. ನೀವೂ ಅವರಂತೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಡಿಕೆಶಿ ಅವರೇ ನೀವು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಕಾಂಗ್ರೆಸ್ ಪಕ್ಷದ ನಾನಾ ಘಟಕಗಳಿಗೆ ಎರಡು ವರ್ಗದ ಜನರನ್ನು ಮಾತ್ರ ನೇಮಕ ಮಾಡಿದ್ದೀರಿ. ಮೊದಲನೆಯದು ಶೈಲಜಾ ಅಮರನಾಥ್ ಅವರಂಥ ಹಿಂದು ವಿರೋಧಿಗಳು. ಎರಡನೆಯದು ನಲಪಾಡ್ ಅವರಂತಹ ರೌಡಿಗಳು. ಇಂಥ ಆಯ್ಕೆಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಎಂದು ಬಿಜೆಪಿ ಆಗ್ರಹಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.