ವಿಜಯೇಂದ್ರ
ಬೆಂಗಳೂರು: ಬಿಜೆಪಿಯ 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 23 ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ಪಟ್ಟಿ ಪ್ರಕಟವಾಗಿದ್ದು, ಈ ಪೈಕಿ ಆರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದವರನ್ನೇ ಮುಂದುವರಿಸಲಾಗಿದೆ.
ಇವರಲ್ಲಿ ಬಹುತೇಕರು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆಯ್ಕೆಯವರೇ ಆಗಿದ್ದಾರೆ. ಕೆಲವರು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬೆಂಬಲಿಗರು. ಬಹುಪಾಲು ಎಲ್ಲರೂ ಬಿಜೆಪಿ ಮೂಲದವರೇ ಆಗಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ವಿಜಯನಗರ, ಕಲಬುರಗಿ (ಗ್ರಾಮಾಂತರ) ಮತ್ತು ಯಾದಗಿರಿ ಜಿಲ್ಲಾಧ್ಯಕ್ಷರ ಸ್ಥಾನ ಹೊಸಬರಿಗೆ ಲಭಿಸಿದೆ.
ಇನ್ನೂ 16 ಸಂಘಟನಾ ಜಿಲ್ಲೆಗಳ ಅಧ್ಯಕ್ಷರ ಸ್ಥಾನಗಳಿಗೆ ಆಯ್ಕೆ ಆಗಬೇಕಿದೆ. ಈ ಜಿಲ್ಲೆಗಳ ಪೈಕಿ ಕೆಲವು ಜಿಲ್ಲೆಗಳಲ್ಲಿ ವಿಜಯೇಂದ್ರ ಅವರ ಬಗ್ಗೆ ಅಪಸ್ವರ ಇದೆ. ಹೀಗಾಗಿ ಅಲ್ಲಿನ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಲು ಶೇ 50ರಷ್ಟು ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಒಮ್ಮತದ ಒಪ್ಪಿಗೆ ಇದ್ದರೂ ಸಾಕಾಗುತ್ತದೆ. ಈಗ ಆಯ್ಕೆ ಮಾಡಿರುವ ಪಟ್ಟಿಯಿಂದ ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರಿಯಲು ಯಾವುದೇ ತೊಡಕು ಆಗುವುದಿಲ್ಲ. ಬಹುತೇಕರು ಹಿಂದಿನ ಬಾರಿ ವಿಜಯೇಂದ್ರ ಅವರಿಂದಲೇ ನೇಮಕಗೊಂಡವರು ಎಂದೂ ಮೂಲಗಳು ಹೇಳಿವೆ.
ಈ ಬಾರಿ 45ರಿಂದ 60 ವರ್ಷ ಒಳಗಿನ ವಯೋಮಿತಿಯವರಿಗೆ ನೀಡಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸೋಷಿಯಲ್ ಎಂಜಿನಿಯರಿಂಗ್ಗೆ ಆದ್ಯತೆ ನೀಡಿ, ಸಣ್ಣ ಪುಟ್ಟ ಜಾತಿಗಳವರಿಗೆ ಆದ್ಯತೆ ನೀಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ತಾವು ಹೇಳಿದವರನ್ನು ಆಯ್ಕೆ ಮಾಡಲಿಲ್ಲ ಎಂಬ ಕಾರಣಕ್ಕೆ ಡಾ.ಕೆ.ಸುಧಾಕರ್ ಅವರು ಪಕ್ಷದ ಅಧ್ಯಕ್ಷರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಅಧ್ಯಕ್ಷರ ಆಯ್ಕೆ ಪಟ್ಟಿಯನ್ನು ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಬಿಡುಗಡೆಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.