ಬೆಂಗಳೂರು: ಬಿಜೆಪಿಯಲ್ಲಿ ಸಚಿವರ ಜೊತೆ ಮುಖ್ಯಮಂತ್ರಿಗಳೂ ಟಿಕೆಟ್ ಕಳೆದುಕೊಳ್ಳುವ ಅಪಾಯ ಇದೆ ಎಂದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಚಾಮುಂಡೇಶ್ವರಿಯಲ್ಲಿ ಸೋಲು, ಬಾದಾಮಿಯಲ್ಲಿ ಗೆಲ್ಲುವ ಭರವಸೆಯಿಲ್ಲ, ಚಾಮರಾಜಪೇಟೆ ಸೇರಿ ಇತರೆಡೆಗೆ ವಲಸೆ. ಮಾನ್ಯ ಸುಳ್ಳುರಾಮಯ್ಯ ಅವರೇ, ಅಸುರಕ್ಷಿತೆಯ ಭಾವನೆಯಲ್ಲಿರುವ ನಿಮಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ಸಾಮರ್ಥ್ಯವಿದೆಯಾ? ಅಥವಾ, ಮಾಜಿ ಮುಖ್ಯಮಂತ್ರಿ ಎಂಬ ಟವೆಲ್ ಹಾಸಿ ಟಿಕೆಟ್ ಗಿಟ್ಟಿಸಿಕೊಳ್ಳುವ ತಂತ್ರ ಪ್ರಯೋಗಿಸುತ್ತೀರಾ? ಎಂದು ಟೀಕಿಸಿದೆ.
ಮತ್ತೊಂದು ಟ್ವೀಟ್ನಲ್ಲಿ, ಐವತ್ತು ವರ್ಷ ರಾಜಕೀಯದಲ್ಲಿದ್ದರೂ ಸ್ವಂತದೊಂದು ಕ್ಷೇತ್ರ ಗಟ್ಟಿ ಮಾಡಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಿಲ್ಲ. ಸುಳ್ಳುರಾಮಯ್ಯ ಅವರೇ, ಮೊದಲು ನಿಮ್ಮ ಭವಿಷ್ಯ ಏನೆಂದು ರೂಪಿಸಿಕೊಳ್ಳಿ. ಮುಖ್ಯಮಂತ್ರಿಯಾಗಿದ್ದುಕೊಂಡು ಸ್ವಕ್ಷೇತ್ರದಲ್ಲಿ ಸೋತ ನೀವು ಬೇರೆಯವರ ಬಗ್ಗೆ ಚಿಂತಿಸಬೇಡಿ' ಎಂದು ಹೇಳಿದೆ.
ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾನದಂಡದ ಕುರಿತು ಪ್ರಜಾವಾಣಿಯ ಶನಿವಾರದ ಸಂಚಿಕೆಯಲ್ಲಿ 'ಟಿಕೆಟ್ ಹಂಚಿಕೆಗೆ ಬಿಜೆಪಿ ಮಾನದಂಡ' ಎಂಬ ಶೀರ್ಷಿಕೆಯ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಪ್ರಕಟಸಿದ್ದ ಸಿದ್ದರಾಮಯ್ಯ ಅವರು ಬಿಜೆಪಿಯನ್ನು ಗೇಲಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.