ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಸ್ಥಿತಿ ‘ಒಲ್ಲದ ಸಂಸಾರದಂತಿದೆ. ಯಾವಾಗ ಬೇಕಿದ್ದರೂ ಡಿವೋರ್ಸ್ ಆಗಬಹುದು’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಆಡಳಿತ ಪಕ್ಷವನ್ನು ಟೀಕಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸರ್ಕಾರ ಟೇಕಾಫ್ ಆಗಿಲ್ಲ. ಮುಂದೆಯೂ ಆಗುವುದಿಲ್ಲ ಎಂದು ಕಚೇರಿಯಿಂದ ವಿಮುಖರಾದ ಸಚಿವರ ಧೋರಣೆಯೇ ಹೇಳುತ್ತಿದೆ. ಕಚೇರಿಗೆ ತೆರಳಿ ತಮ್ಮ ನೂತನ ಖಾತೆಯ ವಿವರಗಳ ಪಡೆದು, ಅಧಿಕಾರಿಗಳೊಂದಿಗೆ ಚರ್ಚಿಸಿ, ಆಗಬೇಕಾದ ಕೆಲಸಗಳತ್ತ ಗಮನಿಸಬೇಕು’ ಎಂದು ಆಗ್ರಹಿಸಿದೆ.
ಖಾತೆ ಹಂಚಿಕೆ ಕುರಿತಾದ ಅಸಮಾಧಾನವನ್ನು ಗಮನಿಸಿದರೆ, ರಾಜ್ಯ ಸರ್ಕಾರದ ಸ್ಥಿತಿ ‘ಒಲ್ಲದ ಸಂಸಾರದಂತಿದೆ. ಯಾವಾಗ ಬೇಕಿದ್ದರೂ ಡಿವೋರ್ಸ್ ಆಗಬಹುದು’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
‘ಬಿಜೆಪಿ ಸಚಿವರೆಲ್ಲರೂ ಒಲ್ಲದ ಮನಸ್ಸಿನಿಂದ ಬಲವಂತವಾಗಿ ಕಚೇರಿಯಲ್ಲಿ ಕೂರಿಸಲ್ಪಟ್ಟವರೇ. ಸಚಿವರು ಒಲ್ಲದ ಖಾತೆಯಲ್ಲಿ ಶ್ರದ್ಧೆ ಕಳೆದುಕೊಳ್ಳುವುದರಿಂದ ಅಭಿವೃದ್ಧಿ ಕೆಲಸಗಳು ನಿಂತ ನೀರಾಗುವುದು ಖಚಿತ. ತಮಗೆ ಸಿಕ್ಕಿರುವ ಖಾತೆಗಳ ಆಳ, ಅಗಲವನ್ನು ಅರ್ಥ ಮಾಡಿಕೊಂಡು ಕೆಲಸಗಳ ಬಗ್ಗೆ ಚಿಂತಿಸಬೇಕಾದ ಬಿಜೆಪಿ ಸಚಿವರ ನಿರಾಸಕ್ತಿ ಎದ್ದು ಕಾಣುತ್ತಿದೆ’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.