ADVERTISEMENT

ಎಸ್‌ಸಿ, ಎಸ್‌ಟಿ, ಬಡವರ ಪರ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿಗಳಿಗೆ ಬೊಮ್ಮಾಯಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2021, 10:26 IST
Last Updated 31 ಡಿಸೆಂಬರ್ 2021, 10:26 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)   

ಬೆಂಗಳೂರು: ಎಸ್‌ಸಿ, ಎಸ್‌ಟಿ ಹಾಗೂ ಬಡವರಿಗೆ ಸಂಬಂಧಿಸಿದ ವಿಚಾರಗಳಲ್ಲಿ ವಿಳಂಬ ಮಾಡುವುದು ಸಲ್ಲ. ತಕ್ಷಣವೇ ಕಾರ್ಯನಿರ್ವಹಿಸಿ ಪರಿಹಾರ ಒದಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆದಷ್ಟು ಜನರ ಬಳಿ ತೆರಳಿ ಕಾರ್ಯನಿರ್ವಹಿಸಬೇಕು. ಜನರು ಜಿಲ್ಲಾಧಿಕಾರಿ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾರದಂತೆ ಮಾಡಬೇಕು. ಜನರ ಬಳಿಗೇ ಜಿಲ್ಲಾಧಿಕಾರಿಗಳು ತೆರಳುವಂತಾಗಬೇಕು. ಕಂದಾಯ ಸಚಿವರೇ ಜನರ ಬಳಿ ತೆರಳಿ, ಅವರ ಸಮಸ್ಯೆ ಆಲಿಸಿ ಅವುಗಳನ್ನು ಬಗೆಹರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳೂ ಇದೇ ಹಾದಿ ಅನುಸರಿಸಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.

ಕೋವಿಡ್–19 ವಿರುದ್ಧದ ಲಸಿಕಾ ಅಭಿಯಾನವನ್ನೂ ಚುರುಕುಗೊಳಿಸುವಂತೆ ಮುಖ್ಯಮಂತ್ರಿಗಳು ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಬೆಳೆ ಪರಿಹಾರಕ್ಕೆ ₹1,061.24 ಕೋಟಿ ಬಿಡುಗಡೆ’

ಬೆಳೆ ಪರಿಹಾರವಾಗಿ ರಾಜ್ಯದ ರೈತರಿಗೆ ಈಗಾಗಲೇ ₹1,061.24 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಪ್ರತಿ ಬಾರಿ ಈ ವರ್ಷದ ಪರಿಹಾರವನ್ನು ಮುಂದಿನ ವರ್ಷ ನೀಡಲಾಗುತ್ತಿದೆ. ಆದರೆ ಈ ಬಾರಿ ಸಂಪ್ರದಾಯ ಮುರಿದು ಒಂದೇ ತಿಂಗಳಲ್ಲಿ 14 ಲಕ್ಷಕ್ಕೂ ಹೆಚ್ಚು ರೈತರಿಗೆ ಈಗಾಗಲೇ ಬೆಳೆ ಪರಿಹಾರ ನೀಡಲಾಗಿದೆ ಎಂದು ಅಶೋಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.