ADVERTISEMENT

ಸಿಎಂ ಪುತ್ರಿಗೂ ಕೋವಿಡ್ ಪಾಸಿಟಿವ್‌: ಸಚಿವರು, ಅಧಿಕಾರಿಗಳು ಕ್ವಾರಂಟೈನ್‌

ಬಿಎಸ್‌ವೈ ಸಂಪರ್ಕಕ್ಕೆ ಬಂದ ಸಿಬ್ಬಂದಿಗೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 1:45 IST
Last Updated 4 ಆಗಸ್ಟ್ 2020, 1:45 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ    

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೋವಿಡ್ ದೃಢಪಟ್ಟಿರುವುದರಿಂದ ಅವರ ಸಂಪರ್ಕಕ್ಕೆ ಬಂದಿದ್ದ ಸಚಿವರಾದ ಆರ್‌.ಅಶೋಕ, ಬಸವರಾಜ ಬೊಮ್ಮಾಯಿ, ಬೈರತಿ ಬಸವರಾಜ, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಮಲ್ ಪಂತ್, ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಕ್ವಾರಂಟೈನ್‌ ಆಗಿದ್ದಾರೆ.

ಮುಖ್ಯಮಂತ್ರಿಯವರ ಪುತ್ರಿ ಪದ್ಮಾವತಿ ಅವರಿಗೂ ಪಾಸಿಟಿವ್‌ ಆಗಿದ್ದು, ಅವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಡಿಯೂರಪ್ಪ ಅವರಿಗಾಗಲಿ, ಪದ್ಮಾವತಿಗಾಗಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ತಮ್ಮನ್ನು ಭೇಟಿ ಮಾಡಿದ್ದರಿಂದ ರಾಜ್ಯಪಾಲ ವಜುಭಾಯಿ ವಾಲಾ ಅವರೂ ರ‍್ಯಾಪಿಡ್‌ ಆಂಟಿಜೆನ್‌ ಪರೀಕ್ಷೆ ಮಾಡಿಸಿಕೊಂಡಿದ್ದು, ನೆಗೆಟಿವ್‌ ಬಂದಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ಬೊಮ್ಮಾಯಿ ಅವರೂ ಪರೀಕ್ಷೆ ಮಾಡಿಸಿಕೊಂಡಿದ್ದು ಅವರಿಗೂ ನೆಗೆಟಿವ್‌ ಬಂದಿದೆ. ಬೊಮ್ಮಾಯಿ ಮತ್ತು ಕಮಲ್ ಪಂತ್ ಅವರು ಸ್ವಗೃಹಗಳಲ್ಲೇ ಕ್ವಾರಂಟೈನ್‌ ಆಗಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ ಮತ್ತು ‘ಕಾವೇರಿ’ಯಲ್ಲೂ ಆರು ಮಂದಿ ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದಾರೆ. ಅವರನ್ನೂ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಕಳೆದ ವಾರ ರಾಜ್ಯಪಾಲರನ್ನು ಭೇಟಿ ಮಾಡಿದ್ದೂ ಅಲ್ಲದೆ, ಮನೆಯಲ್ಲಿಯೇ ಪ್ರಮುಖರ ಸಭೆ, ಮೆಟ್ರೊ ಸುರಂಗಮಾರ್ಗಕ್ಕೆ ಚಾಲನೆ ಹಾಗೂ ಕಿಯೋನಿಕ್ಸ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯ ನಿಮಿತ್ತ ಪುತ್ರ ವಿಜಯೇಂದ್ರ ಅವರ ಮನೆಯಲ್ಲಿ ಊಟ ಮಾಡಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ನಾನು ಆರೋಗ್ಯವಾಗಿದ್ದೇನೆ; ನೀವು ಕ್ಷೇಮವಾಗಿರಿ’

ಕೋವಿಡ್‌ ಪಾಸಿಟಿವ್‌ನಿಂದ ಆಸ್ಪತ್ರೆಗೆ ದಾಖಲಾಗಿರುವ ಯಡಿಯೂರಪ್ಪ ಅವರು ಸೋಮವಾರ ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದು, ‘ವೈದ್ಯರು ತಪಾಸಣೆ ಮಾಡಿದ್ದು, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿರುವ ರಾಜ್ಯದ ಜನರಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

‘ನಿನ್ನೆ ರಾತ್ರಿ 8 ರಿಂದ 9 ರ ವೇಳೆಯಲ್ಲಿ ಕೋವಿಡ್‌ ಪಾಸಿಟಿವ್‌ ಆಗಿರುವುದು ದೃಢಪಟ್ಟಿತು. ಬಳಿಕ ಆಸ್ಪತ್ರೆಗೆ ಸೇರಿದೆ. ಚಿಂತಿಸುವ ಅಗತ್ಯವಿಲ್ಲ. ಬೇಗನೆ ಗುಣಮುಖರಾಗಿ ಮನೆಗೆ ಹಿಂದಿರುಗುತ್ತೀರಿ ಎಂದು ವೈದ್ಯರು ಹೇಳಿದ್ದಾರೆ’ ಎಂದು ತಿಳಿಸಿದರು.

‘ನನ್ನ ಆರೋಗ್ಯ ವಿಚಾರಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಪ್ರಧಾನಿ ದೇವೇಗೌಡ, ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವೆ ನಿರ್ಮಲಾಸೀತಾರಾಮನ್ ಮುಂತಾದವರು ದೂರವಾಣಿ ಕರೆ ಮಾಡಿ ವಿಶ್ವಾಸ ತುಂಬಿದ್ದಾರೆ’ ಎಂದು ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.