ಬೆಂಗಳೂರು: ‘ನನ್ನ ಮೊದಲ ಮತ ಮೋದಿ ಅವರಿಗೆ’ ಎಂದು ‘ಕರ್ನಾಟಕ ಕಾಂಗ್ರೆಸ್’ ಬುಧವಾರ ಮಧ್ಯಾಹ್ನ ಟ್ವೀಟ್ ಮಾಡಿದೆ. ಈ ವಿಷಯವನ್ನೇ ಮುಂದಿಟ್ಟುಕೊಂಡು ಕಮಲ ಪಡೆ ಕಾಂಗ್ರೆಸ್ ಪಕ್ಷದ ಕಾಲೆಳೆದಿದೆ.
‘ಭಾರತದ ಕಲ್ಪನೆ ಎಂದರೆ ಪ್ರೀತಿ, ಕೋಮು ಸಾಮರಸ್ಯ, ಅಭಿವೃದ್ಧಿ, ಏಕತೆ, ಜನರ ಘನತೆ. ಸಮಾನತೆಯ ಹಾಗೂ ಸ್ವಾತಂತ್ರ್ಯದ ಹಕ್ಕು ರಕ್ಷಿಸಲು ಪ್ರತಿಜ್ಞೆ ಸ್ವೀಕರಿಸೋಣ. ನನ್ನ ಮೊದಲ ಮತ ಮೋದಿ. ನಂಬಿಕೆಗೆ ಕಾಂಗ್ರೆಸ್’ ಎಂದು ಕರ್ನಾಟಕ ಕಾಂಗ್ರೆಸ್ ಖಾತೆಯಲ್ಲಿ ಟ್ವೀಟ್ ಮಾಡಲಾಯಿತು. ಈ ಟ್ವೀಟ್ ಅನ್ನು ಕೆಲವೇ ಕ್ಷಣಗಳಲ್ಲಿ ‘ಬಿಜೆಪಿ ಕರ್ನಾಟಕ’ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಯಿತು. ವಿರೋಧಿಗಳು ಸಹ ಮೋದಿ ಅವರಿಗೆ ಮತ ಹಾಕಿ ಎನ್ನುತ್ತಿದ್ದಾರೆ’ ಎಂದೂ ವ್ಯಂಗ್ಯವಾಡಿತು. ಕೆಲವೇ ನಿಮಿಷಗಳಲ್ಲಿ ಕರ್ನಾಟಕ ಕಾಂಗ್ರೆಸ್ ತನ್ನ ಲೋಪವನ್ನು ಸರಿಪಡಿಸಿಕೊಂಡಿತು.
’ಸಿದ್ದರಾಮಯ್ಯ ಅವರೇ, ನಿಮ್ಮ ಪಕ್ಷದೊಳಗಿನ ವಿದ್ಯಾವಂತ ಯುವಜನತೆಗೆ ಮೋದಿ ಅವರೇ ಪ್ರಧಾನಿಯಾಗಬೇಕು ಆಸೆಯು ಅಕ್ಷರ ರೂಪದಲ್ಲಿ ಬಂದಿದೆ. ನಿಮ್ಮ ಮನೆಯನ್ನು ಮೊದಲು ದುರಸ್ತಿ ಮಾಡಿಕೊಳ್ಳಿ. ಆಮೇಲೆ ಊರಿಗೆ ಉಪದೇಶ ಮಾಡುವಿರಂತೆ’ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಟ್ವಿಟರ್ನಲ್ಲಿ ಲೇವಡಿ ಮಾಡಿದ್ದಾರೆ.
‘ನಿಮ್ಮ ಫೋಟೋಶಾಪ್ ಪ್ರವೀಣರ ಐ.ಟಿ ಟೀಮ್ ಕಳಿಸಿದ್ದೆಲ್ಲಾ ನಂಬಿ ಟ್ವೀಟ್ ಮಾಡುತ್ತಿದ್ದೀರ! ಕೇಂದ್ರ ಮಂತ್ರಿಯಾಗಿರುವ ನೀವು ಕೊಂಚ ಜವಾಬ್ದಾರಿಯನ್ನು ಪ್ರದರ್ಶಿಸಿ ಸ್ವಾಮಿ! ನಿನ್ನೆ ಜನರೇ ನಿಮ್ಮನ್ನು ಪ್ರಚಾರಕ್ಕೆ ಬಿಡದೆ ಓಡಿಸಿದ್ದಾರೆ...ಅಷ್ಟು ಬೇಗ ಮರೆತುಹೋಯಿತೇ?!’ ಎಂದು ಆದರ್ಶ್ ಕುಮಾರ್ ಎಚ್.ಎನ್. ಎಂಬುವರು ಟ್ವೀಟ್ ಮಾಡಿದ್ದಾರೆ. ‘ಇದು ಒರಿಜಿನಲ್. ಇದನ್ನು ಕಣ್ತುಂಬಿಕೊಳ್ಳಿ’ ಎಂದು ರಮೇಶ್ ಎಚ್.ಕೆ. ಎಂಬವರು ಕರ್ನಾಟಕ ಕಾಂಗ್ರೆಸ್ನ ಟ್ವೀಟ್ ಅನ್ನು ಶೇರ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.