ADVERTISEMENT

ಆರ್ಥಿಕ ಪ್ಯಾಕೇಜ್ ಕೊಡಲೇಬೇಕು: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 18 ಮೇ 2021, 18:03 IST
Last Updated 18 ಮೇ 2021, 18:03 IST
 ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್    

ಬೆಂಗಳೂರು: ‘ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವವರಿಗೆ ರಾಜ್ಯ ಸರ್ಕಾರ ಆರ್ಥಿಕ ಪ್ಯಾಕೇಜ್ ಕೊಡಲೇಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಗೊಬ್ಬರದ ಬೆಲೆ ಗಗನಕ್ಕೇರಿದೆ. ಹೂ, ಹಣ್ಣು, ತರಕಾರಿ ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಒತ್ತಾಯಿಸಿದರು. ‘ಲಸಿಕೆ ನೀಡುವುದು ಕೇಂದ್ರದ ಕೆಲಸ. ರಾಜ್ಯ ಸರ್ಕಾರ ಜಾಗತಿಕ ಟೆಂಡರ್ ಕರೆಯುವುದು ಏಕೆ. ಇದರಲ್ಲೂ ಕಮಿಷನ್ ಹೊಡೆಯಲು ಮುಂದಾಗಿದ್ದಾರೆ. ಲಸಿಕೆ ವಿಚಾರದಲ್ಲಿ ಆರೋಗ್ಯ ಸಚಿವರಿಗೂ, ಉಪಮುಖ್ಯಮಂತ್ರಿಗೂ ಸಮನ್ವಯತೆ ಇಲ್ಲ’ ಎಂದರು.

‘ಪಕ್ಷದ ಶಾಸಕರ, ಸಂಸದರ ನಿಧಿಯಿಂದ ₹ 100 ಕೋಟಿಯನ್ನು ಲಸಿಕಾ ಕಾರ್ಯಕ್ರಮಕ್ಕೆ ಬಳಸಲು ಸರ್ಕಾರ ಅನುಮತಿ ನೀಡಲಿ. ಲಸಿಕೆ ಹೇಗೆ ವಿತರಿಸಬೇಕು ಎಂಬುದನ್ನು ನಾವು ತೋರಿಸುತ್ತೇವೆ. ಸರ್ಕಾರದಲ್ಲಿ ಜಗಳ, ಯುದ್ಧ ನಡೆಯುತ್ತಿದ್ದು, ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಮುಖ್ಯಮಂತ್ರಿ ಓದುತ್ತಿದ್ದಾರೆ. ರಾಜ್ಯದ ನಾಯಕತ್ವದ ಬಗ್ಗೆ ಪ್ರಧಾನಿಗೆ ನಂಬಿಕೆ ಇಲ್ಲ. ನಂಬಿಕೆ ಇದ್ದಿದ್ದರೆ, ಅವರು ಜಿಲ್ಲಾಧಿಕಾರಿಗಳ ಸಭೆ ಯಾಕೆ ಮಾಡುತ್ತಿದ್ದರು’ ಎಂದೂ ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.