ಹೊಸಪೇಟೆ (ವಿಜಯನಗರ): ‘ನೈತಿಕ ಪೊಲೀಸಗಿರಿಗೆ ಬಿಜೆಪಿಯವರು ಕುಮ್ಮಕ್ಕು ಕೊಟ್ಟರೆ ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಹೂಡಿಕೆದಾರರು ಬರುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಎಚ್ಚರಿಸಿದರು.
‘ಈಗಾಗಲೇ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕಬ್ಬಿಣ, ಸಿಮೆಂಟ್, ತೈಲ ದರ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಹೆಸರಿನಲ್ಲಿ ಬಿಜೆಪಿಯವರು ‘ಡೈಲಿ ಪಿಕ್ ಪಾಕೆಟ್’ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಕೋಮು ಭಾವನೆ ಕೆರಳಿಸಿ ದೇಶ ಇಬ್ಭಾಗ ಮಾಡುತ್ತಿದ್ದಾರೆ. ಕೋಮುಭಾವನೆ ಕೆರಳಿಸಿ ಲಾಭ ಮಾಡಿಕೊಳ್ಳಬಹುದು ಎಂದು ಬಿಜೆಪಿ ಅಂದುಕೊಂಡಿದೆ. ಆದರೆ, ಇಡೀ ನಮ್ಮ ವ್ಯವಸ್ಥೆ ನಾಶವಾಗುತ್ತಿದೆ. ಅನೇಕ ಜನ ಹೂಡಿಕೆದಾರರು ದೇಶ ಬಿಟ್ಟು ಹೋಗಿದ್ದಾರೆ. ಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು’ ಎಂದು ಗುರುವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
‘ನೈತಿಕ ಪೊಲೀಸಗಿರಿಗೆ ಸ್ವತಃ ಮುಖ್ಯಮಂತ್ರಿಯವರೇ ಕುಮ್ಮಕ್ಕು ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಇದರಿಂದ ಅಪಾಯವಿದೆ ಎಂದು ಸಿ.ಎಂ.ಗೆ ಕಿವಿಮಾತು ಹೇಳುತ್ತಿದ್ದೇನೆ. ನಮಗೆ ಸಂವಿಧಾನ, ಜಾತ್ಯತೀತ ತತ್ವ ಬಹಳ ಮುಖ್ಯ. ಆದರೆ, ಧರ್ಮ ಬಿಡಲು ಯಾರಿಗೂ ಹೇಳಿಲ್ಲ. ಯಾರ್ಯಾರಿಗೆ ಯಾವ ಧರ್ಮದ ಆಚರಣೆಗಳನ್ನು ಪಾಲಿಸಬೇಕು ಅನಿಸುತ್ತದೆಯೋ ಅವರು ಪಾಲಿಸಬಹುದು. ಭಗವದ್ಗೀತೆ, ಕುರಾನ್, ಬೈಬಲ್ ಕೂಡ ಸಂವಿಧಾನವಿದ್ದಂತೆಯೇ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.