ADVERTISEMENT

‘ನಮ್ಮನ್ನು ಪುನಃ ಗಡ್ಡೆಗೆ ಬಿಡಿ’: ನಡುಗಡ್ಡೆ ನಿವಾಸಿಗಳಿಂದ ಅಧಿಕಾರಿಗಳಿಗೆ ಮನವಿ

ಕೃಷ್ಣಾ ನದಿ ಪ್ರವಾಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 21:35 IST
Last Updated 18 ಆಗಸ್ಟ್ 2020, 21:35 IST
ಮ್ಯಾದರಗಡ್ಡಿಯಲ್ಲಿ ಸಿಲುಕಿದ್ದ ಸಂತ್ರಸ್ತರು ಸುರಕ್ಷಿತ ಸ್ಥಳಕ್ಕೆ ಬಂದ ಬಳಿಕ ಪುನಃ ಗಡ್ಡೆಗೆ ಬಿಟ್ಟು ಬರುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು
ಮ್ಯಾದರಗಡ್ಡಿಯಲ್ಲಿ ಸಿಲುಕಿದ್ದ ಸಂತ್ರಸ್ತರು ಸುರಕ್ಷಿತ ಸ್ಥಳಕ್ಕೆ ಬಂದ ಬಳಿಕ ಪುನಃ ಗಡ್ಡೆಗೆ ಬಿಟ್ಟು ಬರುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು   

ಲಿಂಗಸುಗೂರು: ಕೃಷ್ಣಾ ನದಿಯ ಪ್ರವಾಹದಿಂದ ನಡುಗಡ್ಡೆ ಮ್ಯಾದರಗಡ್ಡಿಯಲ್ಲಿ ಸಿಲುಕಿದ್ದ ನಾಲ್ವರನ್ನು ಜಿಲ್ಲಾಡಳಿತದ ಅಧಿಕಾರಿಗಳು ರಕ್ಷಿಸಿ ಬೋಟ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಆದರೆ ನಡುಗಡ್ಡೆ ನಿವಾಸಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಪ್ರವಾಹದ ಸಂದರ್ಭದಲ್ಲಿ ನಮ್ಮನ್ನು ಹೀಗೆ ರಕ್ಷಿಸುತ್ತೀರಿ. ಆದರೆ ಸ್ಥಳಾಂತರ ಮಾಡಿದ ಕಡೆಯಲ್ಲಿ ನಮಗೆ ಬದುಕಲು ವ್ಯವಸ್ಥೆ ಮಾಡುವುದಿಲ್ಲ. ನಮ್ಮನ್ನು ಪುನಃ ನಡುಗಡ್ಡೆಗೆ ಬಿಟ್ಟು ಬಿಡಿ’ ಎಂದು ನಾಲ್ವರು ಪಟ್ಟು ಹಿಡಿದರು.

‘15 ವರ್ಷಗಳಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಹುಸಿ ಭರವಸೆ ನೀಡುತ್ತಿದ್ದಾರೆ. ಶಾಶ್ವತ ಪುನರ್ವಸತಿ ಕಲ್ಪಿಸುವ ಬದಲು ನಮ್ಮನ್ನು ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ಇರಿಸಲಾಗುತ್ತದೆ. ಸ್ಥಳಾಂತರ ಮಾಡಿದ ಕಡೆ ಮನೆ, ಜಮೀನು ಕೊಡಿ’ ಎಂದು ಕುಟುಂಬಸ್ಥರಾದ ದೊಡ್ಡಮಲ್ಲಪ್ಪ, ಯಲ್ಲಮ್ಮ, ದೇವಮ್ಮ, ರಾಧಿಕಾ ಹೇಳಿದರು.

ADVERTISEMENT

‘ನಡುಗಡ್ಡೆಯಲ್ಲಿ ಇನ್ನೂ 10 ಮಂದಿ ಇದ್ದಾರೆ. ಅವರನ್ನೂ ಸಹ ಸುರಕ್ಷಿತ ಸ್ಥಳಕ್ಕೆ ಕರೆತರುವ ಉದ್ದೇಶವಿತ್ತು. ಆದರೆ, ನಡುಗಡ್ಡೆಯಲ್ಲಿ ಸಿಲುಕಿದವರೇ ಆಕ್ಷೇಪಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ’ ಎಂದು ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.