ಶಿವಮೊಗ್ಗ: ಈ ಬಾರಿ ಚತುರ್ಥಿಗೆಸಿದ್ಧವಾಗಿದ್ದ ಶೇ 80ರಷ್ಟು ಗಣೇಶ ಮೂರ್ತಿಗಳು ತುಂಗಾ ಪ್ರವಾಹದ ಪರಿಣಾಮ ನೀರಿನಲ್ಲಿ ಕರಗಿಹೋಗಿವೆ.
ಗಣೇಶ ಚತುರ್ಥಿಗೆ ವಾರವಷ್ಟೇ ಬಾಕಿ ಇದೆ. ಭಾರಿ ಪ್ರಮಾಣದಲ್ಲಿ ಮೂರ್ತಿಗಳುಕರಗಿಹೋಗಿರುವ ಕಾರಣ ಹಲವು ತಯಾರಕರು ಮುಂಗಡವಾಗಿ ಪಡೆದಿದ್ದ ಹಣ ವಾಪಸ್ ನೀಡುತ್ತಿದ್ದಾರೆ. ಆರ್ಥಿಕನಷ್ಟ ಅನುಭವಿಸಿದವರು ಮುಂದಿನ ವರ್ಷ ನೀಡುವ ವಾಗ್ದಾನ ಕೊಡುತ್ತಿದ್ದಾರೆ.
ಶಿವಮೊಗ್ಗದ ಕುಂಬಾರ ಗುಂಡಿ ಗಣೇಶ ಮೂರ್ತಿಗಳ ಪ್ರಮುಖ ತಯಾರಿಕಾ ಪ್ರದೇಶ. ತುಂಗಾ ನದಿಯ ಉತ್ತರ ತಟದಲ್ಲಿ ಇರುವ ಬಹು ದೊಡ್ಡ ಬಡಾವಣೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳಲ್ಲಿ ವೈವಿಧ್ಯಮಯ ವಿನಾಯಕ ಮೂರ್ತಿಗಳು ರೂಪುಗೊಳ್ಳುತ್ತವೆ. ಹಿಂದೂ ಮಹಾಸಭಾ ಸೇರಿ ವಿವಿಧ ಸಂಘ–ಸಂಸ್ಥೆಗಳು, ಸಾರ್ವಜನಿಕರು ಮೂರು, ನಾಲ್ಕು ತಿಂಗಳ ಮೊದಲೇ ಮುಂಗಡ ನೀಡುತ್ತಾರೆ. ತಮಗೆ ಬೇಕಾದ ಪರಿಕಲ್ಪನೆಯ, ಅಳತೆಯ ಮೂರ್ತಿಗಳನ್ನು ಸಿದ್ಧಪಡಿಸಲು ಕೋರುತ್ತಾರೆ. ಬೇಡಿಕೆಗೆ ಅನುಗುಣವಾಗಿ ತಯಾರಕರು ಜೇಡಿಮಣ್ಣ ಖರೀದಿಸುತ್ತಾರೆ. ನಂತರ ಹಬ್ಬದ ಎರಡು, ಮೂರು ವಾರಗಳ ಮೊದಲೇ ವಿಭಿನ್ನ ಶೈಲಿಯ, ವೈವಿಧ್ಯಮಯ ವಿನಾಯಕ ಮೂರ್ತಿಗಳು ರೂಪುಗೊಳ್ಳುತ್ತವೆ.
ಮಧ್ಯರಾತ್ರಿ ನುಗ್ಗಿದ್ದ ತುಂಗಾ ಪ್ರವಾಹ: ಶಿವಮೊಗ್ಗ ನಗರದ ಮೂಲಕ ಹಾದುಹೋಗುವ ತುಂಗಾ ನದಿಯ ಉತ್ತರ
ತೀರದಲ್ಲಿ 2.6 ಕಿ.ಮೀ. ತಡೆಗೋಡೆ ನಿರ್ಮಿಸಿದ ನಂತರ ಪ್ರವಾಹದ ಭೀತಿ ಇಲ್ಲದೆ ಜನ ಸುರಕ್ಷಿತ ಭಾವನೆಯಲ್ಲಿದ್ದರು. ಆದರೆ, ಆ.9ರಂದು ರಾತ್ರಿ ಪ್ರವಾಹ ಇಡೀ ಕುಂಬಾರ ಗುಂಡಿ ಆವರಿಸಿತ್ತು. ಸಿದ್ಧವಾಗಿದ್ದ ಗಣೇಶ ಮೂರ್ತಿಗಳು ಬೆಳಗಾಗುವಷ್ಟರಲ್ಲಿ ನೀರಿನಲ್ಲಿ ಮುಳುಗಿಹೋಗಿದ್ದವು.
‘ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ, ನಾಲ್ಕು ಅಡಿಗಿಂತ ಎತ್ತರದ ಮೂರ್ತಿಗಳನ್ನು ನಾನು ತಯಾರಿಸು
ತ್ತೇನೆ. ಸಹೋದರ ಪಂಚಾಕ್ಷರಿಸಣ್ಣ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ. ಪ್ರತಿ ವರ್ಷವೂ ₹ 8 ಲಕ್ಷದಿಂದ ₹ 10 ಲಕ್ಷದ ವಹಿವಾಟು ನಡೆಯುತ್ತದೆ. ಬೇಸಿಗೆಯಿಂದಲೇ ಜೇಡಿಮಣ್ಣು ಸಂಗ್ರಹ ಮಾಡಿಕೊಳ್ಳುತ್ತೇವೆ. ಜೂನ್ನಿಂದ ಮೂರ್ತಿ ಸಿದ್ಧಪಡಿಸುವ ಕೆಲಸ ಆರಂಭಿಸುತ್ತೇವೆ. ಪ್ರವಾಹದ ಪರಿಣಾಮ ಬಹುತೇಕ ಮೂರ್ತಿಗಳು ಹಾಳಾಗಿವೆ. ಕೆರೆಗಳು ಭರ್ತಿಯಾಗಿರುವ ಕಾರಣ ಮಣ್ಣು ಸಿಗುವುದಿಲ್ಲ. ಹೀಗಾಗಿ ಈ ಬಾರಿ ಬೇಡಿಕೆ ಪೂರೈಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಕುಂಬಾರ ಗುಂಡಿಯ ಕಲಾವಿದ ಸಹೋದರರಾದ ಮಲ್ಲಿಕಾರ್ಜುನ, ಗಣೇಶ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.