ADVERTISEMENT

ನೆರೆ ಪರಿಹಾರ: ಪೂರಕ ಬಜೆಟ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 19:46 IST
Last Updated 3 ಅಕ್ಟೋಬರ್ 2019, 19:46 IST

ಬೆಂಗಳೂರು: ಇದೇ 10ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಪೂರಕ ಬಜೆಟ್ ಮಂಡಿಸಲು ಸರ್ಕಾರ ನಿರ್ಧರಿಸಿದೆ.

‘ತುರ್ತಾಗಿ ನೆರೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದ್ದು, ಅದಕ್ಕಾಗಿ ಪೂರಕ ಬಜೆಟ್ ಮಂಡಿಸಲಾಗುವುದು. ಈಗಾಗಲೇ ಮಾಡಿರುವ ವೆಚ್ಚಕ್ಕೂ ಒಪ್ಪಿಗೆ ಪಡೆಯಬೇಕಾಗಿದೆ’ ಎಂದು ಸಚಿವ ಸಂಪುಟ ಸಭೆಯ ನಂತರ ಕಾನೂನು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕೆಲ ಯೋಜನೆಗಳಲ್ಲಿ ಉಳಿದಿದ್ದ ಹಾಗೂ ಹಣ ಬಿಡುಗಡೆಯಾಗಿದ್ದರೂ ತಕ್ಷಣಕ್ಕೆ ಬಳಸದ ಹಣವನ್ನು ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ವರ್ಗಾಯಿಸಲಾಗಿದೆ. ಪರಿಶಿಷ್ಟರಿಗೆಮೀಸಲಿಟ್ಟಿದ್ದ ಹಣವನ್ನು ವರ್ಗಾಯಿಸಿದ್ದರೂ, ಇತರೆಡೆಅದೇ ಸಮುದಾಯದವರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಇರುವ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಈಗ ಪಡೆದುಕೊಂಡಿರುವಷ್ಟೇ ಹಣವನ್ನು ಮತ್ತೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್‌ಗೆ ಒಪ್ಪಿಗೆ ನೀಡುವಂತೆ ಕೇಳಲಾಗುವುದು. ಒಪ್ಪಿಗೆ ಸಿಕ್ಕರೆ ಸಮಸ್ಯೆ ಇಲ್ಲ. ಒಪ್ಪಿಗೆ ಕೊಡದಿದ್ದರೆ ಮತ್ತೆ ಮೂರು ತಿಂಗಳಿಗೆ ಲೇಖಾನುದಾನ ಪಡೆದುಕೊಳ್ಳಲಾಗುವುದು’ ಎಂದು ಹೇಳಿದರು.

ಕೇಂದ್ರದಿಂದ ಒಂದೆರಡು ದಿನಗಳಲ್ಲಿ ಪರಿಹಾರ ಬಿಡುಗಡೆ ಆಗುವ ನಿರೀಕ್ಷೆ ಇದೆ. ಈ ಬಗ್ಗೆ ಕೆಲ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬಂದವು ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.