ADVERTISEMENT

ಶ್ರೀಮಂತ ಪಾಟೀಲ್‌ ಅಪಹರಣ: ಡಿಕೆಶಿ; ವರದಿ ಸಲ್ಲಿಸಲು ಗೃಹ ಸಚಿವಗೆ ಸ್ಪೀಕರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 11:20 IST
Last Updated 18 ಜುಲೈ 2019, 11:20 IST
ಶ್ರೀಮಂತ ಪಾಟೀಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಚಿತ್ರವನ್ನು ಸದನದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರದರ್ಶಿಸಿದರು. ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌. ಚಿತ್ರ: ಎಎನ್‌ಐ ಟ್ವೀಟ್‌
ಶ್ರೀಮಂತ ಪಾಟೀಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಚಿತ್ರವನ್ನು ಸದನದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರದರ್ಶಿಸಿದರು. ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌. ಚಿತ್ರ: ಎಎನ್‌ಐ ಟ್ವೀಟ್‌   

ಬೆಂಗಳೂರು:ಬಲವಂತವಾಗಿ ತಮ್ಮ ಪಕ್ಷದ ಶಾಸಕರನ್ನು ಬಿಜೆಪಿ ಮುಖಂಡರೊಬ್ಬರು ಅಪಹರಣ ಮಾಡಿ ಮುಂಬೈಗೆ ಕರೆದೊಯ್ದಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಸದನದಲ್ಲಿ ಆಪಾದಿಸಿದರು. ಈ ಕುರಿತು ನಾಳೆಯ ಒಳಗೆ ಪೂರ್ಣ ವಿವರ ಸಲ್ಲಿಸುವಂತೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಸೂಚಿಸಿದರು.

ವಿಶ್ವಾಸ ಮತ ಯಾಚನೆಗೆ ಗುರುವಾರ ಕರೆದಿರುವ ಕಲಾಪಲ್ಲಿ ಮಧ್ಯಾಹ್ನ ಊಟದ ವಿರಾಮದ ಬಳಿಕಚರ್ಚೆಗೂ ಮುನ್ನ ಡಿ.ಕೆ. ಶಿವಕುಮಾರ್‌ ಶಾಸಕರನ್ನು ಅಪಹರಿಸಲಾಗಿದೆ ಎಂದು ವಿಷಯ ಪ್ರಸ್ತಾಪಿಸಿದರು.

ಸದನದಲ್ಲಿ ನಡೆದದ್ದೇನು?

ADVERTISEMENT

ಶಾಸಕರ ಅಪಹರಣ!

ಬಲವಂತವಾಗಿ ತಮ್ಮ ಪಕ್ಷದ ಶಾಸಕರನ್ನು ಬಿಜೆಪಿ ಮುಖಂಡರೊಬ್ಬರು ಅಪಹರಣ ಮಾಡಿ ಮುಂಬೈಗೆ ಕರೆದೊಯ್ದಿದ್ದಾರೆ. ಆರೋಗ್ಯವಾಗಿದ್ದೇನೆ ಎಂದರೂ ಬಲವಂತವಾಗಿ ಮುಂಬೈನ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದಾರೆ ಎಂದು ಆಪಾದಿಸಿದ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌, ಶಾಸಕ ಶ್ರೀಮಂತ ಪಾಟೀಲ್‌ ಆಸ್ಪತ್ರೆಯಲ್ಲಿ ಇಸಿಜಿ ಚಿಕಿತ್ಸೆ ಪಡೆಯುತ್ತಿರುವ ಫೋಟೊ ಪ್ರದರ್ಶಿಸಿದರು. ಜತೆಗೆ, ವಿಮಾನದಲ್ಲಿ ಪ್ರಯಾಣ ಮಾಡಿರುವ ಟಿಕೆಟ್‌ಗಳ ಪ್ರತಿಗಳನ್ನು ಪ್ರದರ್ಶಿಸಿ ಸಭಾಧ್ಯಕ್ಷರಿಗೆ ಸಲ್ಲಿಸಿದರು.

ಬಿಜೆಪಿ ಕೈವಾಡ: ದಿನೇಶ್‌

ರಾತ್ರಿಯವರೆಗೂ ಜತೆಗಿದ್ದ ಶ್ರೀಮಂತ ಪಾಟೀಲ್‌ ರೆಸಾರ್ಟ್‌ನಿಂದ ನಾಪತ್ತೆಯಾಗಿದ್ದಾರೆ ಎಂದು ರಾತ್ರಿ ಸುದ್ದಿ ಬಂತು. ಅವರು ಆರೋಗ್ಯವಾಗಿಯೇ ಇದ್ದರು. ಶಾಸಕರು ಕಾಣೆಯಾಗಿರುವ ಹಿಂದೆ ಬಿಜೆಪಿಯ ಕೈವಾಡವಿದೆ. ಇದರ ಬಗ್ಗೆ ತನಿಖೆ ನಡೆಸಿ ಅವರನ್ನು ವಾಪಸ್ ಕರೆಸಬೇಕು ಎಂದು ಸಭಾಧ್ಯಕ್ಷರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಒತ್ತಾಯಿಸಿದರು.

ದನಗಳಂತೆ ಮಾರಾಟಕ್ಕಿಲ್ಲ: ಸಿಎಂ

ಶಾಸಕರು ವಿಮಾನದಲ್ಲಿ ಪ್ರಯಾಣಿಸಿರುವ ದಾಖಲೆಗಳಿವೆ. ಶಾಸಕರನ್ನು ದನಗಳಂತೆ ಮಾರಾಟಕ್ಕೆ ಒಳಪಡಿಸಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ವಿಚಾರಣೆ ನನ್ನ ವ್ಯಾಪ್ತಿಗೆ ಬರಲ್ಲ: ಸ್ಪೀಕರ್‌

ಯಾವ ವಿಮಾನದಲ್ಲಿ ಯಾರು ಹೋದರು? ಎಲ್ಲಿಗೆ ಹೋದರು, ಆ ಬಗ್ಗೆ ವಿಚಾರಣೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಶಾಸಕ ಶ್ರೀಮಂತ ಪಾಟೀಲ ಅವರು ಅನಾರೋಗ್ಯದ ಕಾರಣದಿಂದ ವಿಧಾನಸಭಾ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದಿದ್ದಾರೆ. ಮುಂಬೈನ ಸಂಜೀವಿನಿ ಆಸ್ಪತ್ರೆಯಿಂದ ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆಗಳ ವಿವರವಿರುವ ಪತ್ರ ತಲುಪಿದೆ ಎಂದು ಸಭಾಧ್ಯಕ್ಷ ರಮೇಶ್‌ ಕುಮಾರ್‌ ಸದನಕ್ಕೆ ತಿಳಿಸಿದರು.

ಶೀಘ್ರ ಕುಟುಂದವನ್ನು ಸಂಪರ್ಕಿಸಿ, ನಾಳೆ ಒಳಗೆ ಪೂರ್ಣ ವರದಿ ಸಲ್ಲಿಸಿ–ಸ್ಪೀಕರ್‌

ಗೃಹ ಸಚಿವರೇ ಕೂಡಲೇ ಶ್ರೀಮಂತ ಪಾಟೀಲ್‌ ಅವರ ಮನೆಯವರನ್ನು ಸಂಪರ್ಕಿಸಿ ನಾಳೆಯ ಒಳಗೆ ಪೂರ್ಣ ವರದಿ ಸಲ್ಲಿಸಿ. ಸಿದ್ದರಾಮಯ್ಯ ಅವರು ಕೊಟ್ಟಿರುವ ಪತ್ರ ಹಾಗೂ ನೀಡಿರುವ ಪುರಾವೆಗಳ ಆಧಾರದ ಮೇಲೆ ಗೃಹ ಸಚಿವರು ಗಮನ ವಹಿಸುವಂತೆ ಹೇಳಿತ್ತಿದ್ದೇನೆ. ಈಗಲೇ ಶ್ರೀಮಂತ ಪಾಟೀಲ್‌ ಅವರ ಆರೋಗ್ಯಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಕಲೆಹಾಕಿ. ಇದು ನೈಸರ್ಗಿಕ ಅಲ್ಲ ಎಂದೇ ನನಗೆ ಅನಿಸುತ್ತದೆ, ಇದರ ಬಗ್ಗೆ ತನಿಖೆಯಾಗಬೇಕು ಎಂದು ರಮೇಶ್‌ ಕುಮಾರ್‌ ಗೃಹ ಸಚಿವ ಎಂ.ಬಿ. ಪಾಟೀಲ್‌ ಅವರಿಗೆ ಸೂಚಿಸಿದರು.

* ಅವರಿಗೆ ಮೊದಲಿನಿಂದಲೂ ಹೃದಯಕ್ಕೆ ಸಂಬಂಧಿಸಿದ ತೊಂದರೆ ಇತ್ತೇ?

* ಅವರು ಎಲ್ಲಿದ್ದಾರೆ, ಯಾವಾಗ ಮುಂಬೈಗೆ ಹೋದರು? ಎಲ್ಲದರ ಮಾಹಿತಿ ಇದೆಯೇ?

* ಮುಂಬೈಗೆ ಚಿಕಿತ್ಸೆಗೆ ತೆರೆಳಲು ಕಾರಣವೇನು?,... ಇತ್ಯಾದಿ ಪ್ರಶ್ನೆಗಳನ್ನು ನೀವು ಕೇಳಿ ಮಾಹಿತಿ ಪಡೆಯಬಹುದು ಎಂದು ಸ್ಪೀಕರ್ ಸಚಿವರಿಗೆ ಪ್ರಶ್ನೆಗಳನ್ನೂ ಒದಗಿಸಿದರು.

ಹೆಚ್ಚಿನ ಚಿಕಿತ್ಸೆಗೆಶ್ರೀಮಂತ ಪಾಟೀಲ್‌ ಬೇರೆ ಆಸ್ಪತ್ರೆಗೆ ಶಿಫ್ಟ್

ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವಶಾಸಕ ಶ್ರೀಮಂತ ಪಾಟೀಲ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ‘ಬಾಂಬೆ ಹಾಸ್ಪಿಟಲ್‌ ಅಂಡ್‌ ಮೆಡಿಕಲ್‌ ರಿಸರ್ಚ್‌ ಸೆಂಟರ್‌ನಿಂದ‘ಮುಂಬೈ ಸೆಂಟ್‌ ಜಾರ್ಜ್‌’ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎನ್‌ಐ ಟ್ವೀಟ್‌ ಮಾಡಿದ್ದಾರೆ.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಅವರು ಸಿದ್ದರಾಮಯ್ಯ ಮತ್ತಿತರರ ಜತೆಗೆ ಲವಲವಿಕೆಯಿಂದ ಇದ್ದರು ಎಂದು ರಾಜ್ಯ ಕಾಂಗ್ರೆಸ್‌ ಚಿತ್ರ ಸಹಿತ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.