ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಅಕ್ಟೋಬರ್ 5ಕ್ಕೆ ವಾರ್ಷಿಕ ಸಾಮಾನ್ಯ ಸಭೆ ನಡೆಸುವುದಾದರೆ ಪರಿಷತ್ತಿನ ಅವ್ಯವಹಾರಗಳ ಸಂಬಂಧ ಬಾಕಿ ಇರುವ ತನಿಖೆ ಮುಂದುವರಿಯಬಹುದು’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ–1960ರ ಕಲಂ 27ಎ ಅಡಿ ತನಿಖೆಯಲ್ಲಿ ಭಾಗವಹಿಸುವಂತೆ ಸಹಕಾರ ಇಲಾಖೆ ಇದೇ 15ರಂದು ಜಾರಿ ಮಾಡಿರುವ ನೋಟಿಸ್ಗೆ ತಡೆ ನೀಡಬೇಕು’ ಎಂದು ಕೋರಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಮತ್ತು ಇತರೆ ನಾಲ್ವರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಕನ್ನಡ ಸಾಹಿತ್ಯ ಪರಿಷತ್ತು 2025ರ ಅಕ್ಟೋಬರ್ 5ರಂದು ವಾರ್ಷಿಕ ಸಾಮಾನ್ಯ ಸಭೆ ನಡೆಸುವುದಾದರೆ ಪರಿಷತ್ತಿನ ಅವ್ಯವಹಾರಗಳ ಸಂಬಂಧ ಬಾಕಿ ಇರುವ ತನಿಖೆ ಮುಂದುವರಿಯಬಹುದು. ಆದರೆ, ಉಭಯ ಪ್ರಕ್ರಿಯೆಗಳ ನಿರ್ಧಾರಗಳನ್ನು ಜಾರಿಗೊಳಿಸುವುದಕ್ಕೂ ಮುನ್ನ ನ್ಯಾಯಾಲಯದ ಮುಂದೆ ಇರಿಸಬೇಕು’ ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
‘ಕಲಂ 25ರ ಅಡಿಯ ತನಿಖೆಯ ಫಲಿತಾಂಶ ಮತ್ತು ಕಾಯ್ದೆಯ ಕಲಂ 27ಎ ತನಿಖೆಗೆ ಕಾರಣವಾಗಿರುವುದು ಮತ್ತು ವಾರ್ಷಿಕ ಸಾಮಾನ್ಯ ಸಭೆ ನಡೆದು ಅಲ್ಲಿ ಯಾವುದೇ ನಿರ್ಣಯವಾದರೂ ಅದು ಈ ನ್ಯಾಯಾಲಯದ ಪರಿಶೀಲನೆಗೆ ಒಳಪಡಲಿದೆ’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ಅವರು, ‘ಕಸಾಪದ ಅಕ್ರಮಗಳಿಗೆ ಸಂಬಂಧಿಸಿದ ತನಿಖೆಗೆ ಹಾಜರಾಗಲು ಅಧ್ಯಕ್ಷ ಜೋಶಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಯಾವುದೇ ಪ್ರಕ್ರಿಯೆ ನಡೆದಿಲ್ಲ. ಮುಂದಿನ ದಿನಾಂಕವನ್ನೂ ನಿಗದಿಪಡಿಸಿಲ್ಲ. ಸಮನ್ವಯ ನ್ಯಾಯಪೀಠವು ಈ ಹಿಂದೆ ಬೈ–ಲಾ ಪ್ರಕಾರ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಕಸಾಪಗೆ ಅನುಮತಿ ನೀಡಿದೆ. ಅಂತೆಯೇ, ಕಾಯ್ದೆಯ ಕಲಂ 25ರ ಅನ್ವಯ ಅಕ್ರಮಗಳ ಆರೋಪದ ತನಿಖೆಗೂ ಅನುಮತಿ ನೀಡಿತ್ತು. ಏಕಸದಸ್ಯ ನ್ಯಾಯಪೀಠದ ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ವಿಭಾಗೀಯ ನ್ಯಾಯಪೀಠ ಇದನ್ನು ವಜಾಗೊಳಿಸಿದೆ’ ಎಂದು ವಿವರಿಸಿದರು.
‘ವಿಭಾಗೀಯ ನ್ಯಾಯಪೀಠವು ಮಧ್ಯಂತರ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಕಾರಣ ಕಸಾಪ ಲೆಕ್ಕಪತ್ರ ಸಲ್ಲಿಸಿದೆ. ಸಹಕಾರ ಸೊಸೈಟಿಗಳ ಉಪ ನಿಬಂಧಕರು ಮಧ್ಯಂತರ ವರದಿಯನ್ನು ಸಹಕಾರ ಸೊಸೈಟಿಗಳ ರಿಜಿಸ್ಟ್ರಾರ್ ಅವರಿಗೆ ಸಲ್ಲಿಸಿದ್ದರು. ಇದು ಕಾಯ್ದೆಯ ಕಲಂ 27ಎ ಅಡಿ ತನಿಖೆಗೆ ಅವಕಾಶ ಕಲ್ಪಿಸಿದೆ. ಇದರಿಂದ ಸೊಸೈಟಿಯ ಕಾರ್ಯ ಚಟುವಟಿಕೆಗಳನ್ನು ನಿಭಾಯಿಸಲು ಆಡಳಿತಾಧಿಕಾರಿ ನೇಮಿಸುವ ಸಾಧ್ಯತೆ ಇದೆ. ಹಾಗಾಗಿ, ನೋಟಿಸ್ಗೆ ತಡೆ ನೀಡಬೇಕು’ ಎಂದು ಮನವಿ ಮಾಡಿದ್ದರು.
ಇದಕ್ಕೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ.ಜಿ.ಭಾನು ಪ್ರಕಾಶ್ ಅವರು, ‘ಅಕ್ಟೋಬರ್ 5ರಂದು ನಡೆಸಲು ಉದ್ದೇಶಿಸಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಸಾಪ ನಿರ್ಣಯ ಕೈಗೊಂಡರೆ ತನಿಖೆ ಅನೂರ್ಜಿತವಾಗಲಿದೆ. ಆದ್ದರಿಂದ, ಕಾಯ್ದೆಯ ಕಲಂ 27ಎ ಅಡಿ ತನಿಖೆಗೆ ನ್ಯಾಯಾಲಯ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ 2023-24ನೇ ಸಾಲಿನ ಆರ್ಥಿಕ ವಹಿವಾಟಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಗೆ ತಡೆ ನೀಡಲು ಹೈಕೋರ್ಟ್ 2025ರ ಜುಲೈ 26ರಂದು ಸ್ಪಷ್ಟವಾಗಿ ನಿರಾಕರಿಸಿತ್ತು. ಆದರೆ, ಕಾರ್ಯಕಾರಿ ಸಮಿತಿಯ ನಿರ್ಧಾರದ ಪ್ರಕಾರ ಬೆಂಗಳೂರು ಅಥವಾ ರಾಜ್ಯದ ಯಾವುದೇ ಸ್ಥಳದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸುವ ಅಧಿಕಾರ ಕಸಾಪಕ್ಕೆ ಇದೆ ಎಂದು ಹೇಳಿತ್ತು. ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.