ADVERTISEMENT

ದತ್ತು ಅರ್ಜಿ: ಪರಿಗಣನೆಗೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 17:51 IST
Last Updated 21 ಫೆಬ್ರುವರಿ 2026, 17:51 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿದ್ದ ಶಿವಮೊಗ್ಗದ ದಂಪತಿ, ಮಠದಲ್ಲಿ ಸಿಕ್ಕ ಹಸುಗೂಸನ್ನು ಹತ್ತು ವರ್ಷ ಸಾಕಿ ಸಲಹಿದ ನಂತರ ಇದೀಗ ಅದೇ ಮಗುವನ್ನು ದತ್ತು ಪಡೆಯಲು ನಡೆಸಿರುವ ಕಾನೂನು ಹೋರಾಟಕ್ಕೆ ಹೈಕೋರ್ಟ್‌ ನೆರವು ನೀಡಿದೆ.

‘ಮಾನವೀಯ ನೆಲೆಯಲ್ಲಿ ಮಗುವನ್ನು ನಮಗೇ ದತ್ತು ನೀಡಬೇಕು ಎಂಬ ದಂಪತಿಯ ಮನವಿಯನ್ನು ಪರಿಗಣಿಸಿ’ ಎಂದು ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಾದ ಪ್ರಕರಣವೊಂದರಲ್ಲಿ, ‘ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ’ಕ್ಕೆ (ಸಿಎಆರ್‌ಎ) ಆದೇಶಿಸಿದೆ.

‘ಅರ್ಜಿದಾರರು ಮಗುವನ್ನು ತಮ್ಮ ಸ್ವಂತ ಮಗುವಿನಂತೆ ಸಾಕಿದ್ದಾರೆ. ಹಾಗಾಗಿ, ಮಗು ಅವರ ಕೈಯಲ್ಲಿ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ, ಮಗುವನ್ನು ಮಾರ್ಚ್ 10ಕ್ಕೆ ಬೆಂಗಳೂರಿನ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಮುಂದೆ ಹಾಜರುಪಡಿಸಬೇಕು. ಸಮಿತಿ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಮಗುವನ್ನು ದತ್ತು ಪಡೆಯಲು ಅರ್ಜಿದಾರರ ಅರ್ಹತೆಯನ್ನು ಗುರುತಿಸಬೇಕು. ಅರ್ಜಿದಾರರು ಮಗುವನ್ನು ದತ್ತು ಪಡೆಯಲು ಅರ್ಹರೆಂದು ಕಂಡುಬಂದರೆ, ಬೆಂಗಳೂರಿನ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ಅರ್ಜಿದಾರರ ಮನವಿಯನ್ನು ತ್ವರಿತವಾಗಿ ರವಾನಿಸಿ ಈ ಕುರಿತಾದ ಪ್ರಕ್ರಿಯೆಗಳನ್ನು ಪೂರೈಸಲು ಸೂಚಿಸಬೇಕು’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.