ಬೆಂಗಳೂರು: ಲಾಕ್ಡೌನ್ ವಿಸ್ತರಣೆ ಆಗಿರುವ ಕಾರಣ ನ್ಯಾಯಾಲಯಗಳಲ್ಲಿ ಶೇ 50ರಿಂದ ಶೇ 60ರಷ್ಟು ಸಿಬ್ಬಂದಿಯನ್ನು ರೊಟೇಷನ್ ಆಧಾರದಲ್ಲಿ ನಿಯೋಜಿಸಿಕೊಳ್ಳಲು ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದೆ.
‘ಮೇ 24ರಿಂದ ಮುಂದಿನ ಆದೇಶದ ತನಕ ಈ ಮಾರ್ಗಸೂಚಿ ಜಾರಿಯಲ್ಲಿ ಇರಲಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.
‘ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಹೈಕೋರ್ಟ್ ಪೀಠಗಳಲ್ಲಿ ನಿರ್ದಿಷ್ಟ ಪ್ರಕರಣಗಳಲ್ಲಿ ಮಾತ್ರ ವಕೀಲರು, ಕಕ್ಷಿದಾರರ ಪ್ರವೇಶಕ್ಕೆ ಅವಕಾಶ ಇದೆ. ಬೆಂಗಳೂರಿನ ಪ್ರಧಾನ ಪೀಠ ಆನ್ಲೈನ್ನಲ್ಲೇ ವಿಚಾರಣೆ ನಡೆಸಲಿದೆ. ಅಡ್ವೊಕೇಟ್ ಜನರಲ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಮಾತ್ರ ಹಾಜರಾಗಲು ಅವಕಾಶ ನೀಡಬಹುದು’ ಎಂದು ಮಾರ್ಗಸೂಚಿ ಹೇಳಿದೆ.
‘ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಯಲಗಳಲ್ಲಿ ತುರ್ತು ವಿಷಯ, ಜಾಮೀನು ಅರ್ಜಿ, ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದಾಗಿದೆ. ವಕೀಲರು ಮತ್ತು ಜಾಮೀನು ಪಡೆದಿರುವ ಆರೋಪಿಗಳ ಅನುಪಸ್ಥಿತಿಯಲ್ಲಿ ಯಾವುದೇ ಪ್ರತಿಕೂಲ ಆದೇಶಗಳನ್ನು ಹೊರಡಿಸಬಾರದು’ ಎಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.