ಬೆಂಗಳೂರು: ‘ಶುಲ್ಕ ಪಾವತಿಸಲು ಸಾಧ್ಯವಾಗದ ಕುಟುಂಬಗಳಿಗೆ ಎಲ್ಪಿಜಿ ಅನಿಲ ಸಿಲಿಂಡರ್ ಖರೀದಿಸಲು ಸಹಾಯ ಧನ ನೀಡುವ ಬಗ್ಗೆ ಶೀಘ್ರ ನೀತಿ ರೂಪಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ‘ಎಲ್ಪಿಜಿ ಸಂಪರ್ಕ ಹೊಂದಿದರೂ ಸಿಲಿಂಡರ್ಗೆ ಹಣ ಪಾವತಿಸಲಾಗದ ಸ್ಥಿತಿಯಲ್ಲಿ ಇರುವವರಿಗೆ ಉಚಿತವಾಗಿ ಸಿಲಿಂಡರ್ ಪೂರೈಸಲು ಕಷ್ಟವಾಗುತ್ತದೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರಧಾನ ಮಂತ್ರಿ ಉಜ್ವಲ ಹಾಗೂ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗಳಿಗೆ ಒಳಪಡದ ಬಡವರಿಗೆ ಒಂದು ಬಾರಿಯ ಕ್ರಮದಂತೆ ಸಿಲಿಂಡರ್ ಖರೀದಿಸಲು ಸಹಾಯಧನ ನೀಡುವ ನಿಟ್ಟಿನಲ್ಲಿ ಶೀಘ್ರವೇ ನೀತಿಯೊಂದನ್ನು ರೂಪಿಸಿ ನಿರ್ಣಯ ಕೈಗೊಳ್ಳಬೇಕು. ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು’ ಎಂದು ಸೂಚಿಸಿತು.
ಸರ್ಕಾರಿ ವಕೀಲರ ಮಾಹಿತಿ ಅನುಸಾರ, ರಾಜ್ಯದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿ 1.60 ಕೋಟಿ ಕುಟುಂಬಗಳು ಎಲ್ಪಿಜಿ ಸಂಪರ್ಕ ಹೊಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.