ಬೆಂಗಳೂರು: ‘ಕೆಲವು ಲೇಖಕಿಯರ ಅಭಿಪ್ರಾಯಗಳನ್ನು ಗೌರವಿಸಿ, ಕರ್ನಾಟಕ ಲೇಖಕಿಯರ ಸಂಘಕ್ಕೆ ಚುನಾವಣೆ ನಡೆಸಬೇಕೆನ್ನುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ತಿಳಿಸಿದ್ದಾರೆ.
ಅಧ್ಯಕ್ಷತೆಯ ಅಧಿಕಾರ ಅವಧಿ ಮುಗಿದಿದ್ದರೂ ಚುನಾವಣೆ ನಡೆಸಲುವನಮಾಲಾ ಸಂಪನ್ನಕುಮಾರ್ ಸಿದ್ಧರಿಲ್ಲ ಎಂದು ಸಂಘದ ಹಲವು ಸದಸ್ಯರು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು.ಹೇಮಲತಾ ಮಹಿಷಿ, ಬಿ.ಟಿ. ಲಲಿತಾ ನಾಯಕ್, ವಿಜಯಮ್ಮ, ಉಷಾ ಪಿ. ರೈ, ಸಂಧ್ಯಾ ರೆಡ್ಡಿ, ವಸುಂಧರಾ ಭೂಪತಿ ಮುಂತಾದವರು ಸಹಕಾರ ಸಂಘಗಳ ಇಲಾಖೆ ರಿಜಿಸ್ಟ್ರಾರ್ ಅವರಿಗೆ ಈ ಕುರಿತು ಪತ್ರ ಬರೆದಿದ್ದರು.
‘ಸಂಘವು 2022ರ ಏ.17ರಂದು ಕರೆದ ವಾರ್ಷಿಕ ಸಭೆಯಲ್ಲಿ ಚುನಾವಣೆಯ ಬಗ್ಗೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು. ಕೋವಿಡ್ ಬಿಕ್ಕಟ್ಟಿನಿಂದಾಗಿ ಎರಡು ವರ್ಷಗಳು ಸಂಘದ ಕೆಲಸ ಕಾರ್ಯಗಳನ್ನು ಮಾಡಲಾಗದ ಕಾರಣ, ಸಮಯ ಮತ್ತು ಹಣದ ಸದುಪಯೋದಗ ದೃಷ್ಟಿಯಿಂದ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಬೇಡವೆಂದು ನೂರಾರು ಲೇಖಕಿಯರು ತಿಳಿಸಿದ್ದರು. ಸಂಘದ ನಿಬಂಧನೆಯಲ್ಲಿ ಅಧ್ಯಕ್ಷರು ಮತ್ತು ಸಮಿತಿ ಇನ್ನೊಂದು ಅವಧಿಗೆ ಮುಂದುವರಿಯಲು ಅವಕಾಶವಿದೆ.ಸರ್ವಸದಸ್ಯರ ಸಭೆಯಲ್ಲಿ ಚುನಾವಣೆ ಬೇಡ ಎಂಬ ಬಹುಮತದ ಅಭಿಪ್ರಾಯ ವ್ಯಕ್ತವಾಗಿದ್ದರೂ ಚುನಾವಣೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಪ್ರಕಟಣೆಯಲ್ಲಿ ವನಮಾಲಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.