ADVERTISEMENT

'ಮಹಾ’ ತರಲೆ: ಅಮಿತ್ ಶಾ ಗಮನಕ್ಕೆ– ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 22:31 IST
Last Updated 21 ಡಿಸೆಂಬರ್ 2022, 22:31 IST
   

ಬೆಳಗಾವಿ: ‘ಚೀನಾ ರೀತಿಯಲ್ಲಿ ಕರ್ನಾಟಕದ ಮೇಲೆ ಆಕ್ರಮಣ ಮಾಡುತ್ತೇವೆ ಎಂದು ಮಹಾರಾಷ್ಟ್ರದ ಕೆಲವು ನಾಯಕರು ಹೇಳಿರುವುದು ಅಪ್ರಬುದ್ಧ ಹೇಳಿಕೆ. ಈ ವಿಷಯವನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಚೀನಾವು ಮತ್ತೊಂದು ದೇಶವಾಗಿದ್ದು, ನಮ್ಮ ಸೈನಿಕರು ಚೀನಾ ಆಕ್ರಮಣವನ್ನು ಹಿಮ್ಮೆಟ್ಟಿಸಿದ್ದಾರೆ. ನಾವೆಲ್ಲ ಒಂದೇ ದೇಶದೊಳಗೆ ಇದ್ದೇವೆ. ಕನ್ನಡಿಗರು ಆಕ್ರಮಣ ಮಾಡಲು, ಅವರು ನಮ್ಮ ಮೇಲೆ ಆಕ್ರಮಣ ಮಾಡಲು ಮತ್ತೊಂದು ದೇಶವಲ್ಲ. ಅವರು ಮಾತನಾಡುತ್ತಿರುವುದನ್ನು ನೋಡಿದರೆ ಮಾನಸಿಕ ಸಮತೋಲನ ಕಳೆದುಕೊಂಡಂತೆ ಕಾಣಿಸುತ್ತಿದೆ. ಇದಕ್ಕೆಲ್ಲ, ವಿಧಾನಸಭೆಯಲ್ಲಿ ಗುರುವಾರ ಉತ್ತರ ನೀಡುತ್ತೇನೆ’ ಎಂದರು.

ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕರು ಶಾಸನಸಭೆ ಹಾಗೂ ಹೊರಗಡೆ ಹದ್ದುಮೀರಿ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಈ ವಿಷಯ ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಇದೇ ರೀತಿಯ ರಾಜಕಾರಣವನ್ನು ಮಾಡಲು ಹೋಗಿದ್ದ ಎನ್‌ಸಿಪಿ ನಾಯಕರು ವಿಫಲರಾಗಿದ್ದರು. ಈಗಲೂ ಅವರಿಗೆ ಜಯ ಸಿಗುವುದಿಲ್ಲ ಎಂದರು.

ADVERTISEMENT

‘ರಾಜ್ಯದ ಗಡಿಯೊಳಗೆ ಬರುವ ಯತ್ನವನ್ನು ಅವರು ಮಾಡಿದ್ದರು. ಅವರನ್ನು ಹಿಮ್ಮೆಟ್ಟಿಸಿದ್ದೇವೆ. ರಾಜಕೀಯ ಪಕ್ಷಗಳ ಧ್ವಜ ಹಿಡಿದುಬಂದಿರುವುದನ್ನು ನೋಡಿದರೆ, ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.