ಕೆಎಂಎಫ್ (ನಂದಿನಿ)
ಬೆಂಗಳೂರು: ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಲೀಟರ್ಗೆ ₹5 ರಿಂದ ₹7ಕ್ಕೆ ಹೆಚ್ಚಿಸ ಬೇಕು ಎಂದು ಕರ್ನಾಟಕ ಹಾಲು ಮಹಾ ಮಂಡಲ (ಕೆಎಂಎಫ್) ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಬೆಳಗಾವಿಯಲ್ಲಿ ಡಿಸೆಂಬರ್ನಲ್ಲಿ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೋತ್ಸಾಹಧನ ಏರಿಸುವುದಾಗಿ ಘೋಷಿಸಿದ್ದರೂ ಜಾರಿಯಾಗಿಲ್ಲ. ಬಜೆಟ್ನಲ್ಲಿ ಪ್ರಕಟಿಸಿ ಜಾರಿಗೊಳಿಸುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಹಾಲಿನ ಉತ್ಪಾದನೆ ಪ್ರಮಾಣ ಗಣನೀಯವಾಗಿ ಏರಿಕೆ ಯಾಗಿದ್ದು, ಪ್ರತಿನಿತ್ಯ 1 ಕೋಟಿ ಲೀಟರ್ ಹಾಲನ್ನು ಕೆಎಂಎಫ್ ಸಂಗ್ರಹ ಮಾಡುತ್ತಿದೆ. ಪ್ರೋತ್ಸಾಹಧನ ಏರಿಕೆ ಯಿಂದ ಹಾಲಿನ ಉತ್ಪಾದನೆ ಪ್ರಮಾಣ ವನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಮಹಾಮಂಡಳಿ ಇಟ್ಟುಕೊಂಡಿದೆ.
ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ ₹3 ಏರಿಕೆ ಮಾಡಿದ್ದೂ ಅಲ್ಲದೇ ₹400 ಸಹಾಯಧನ ಹೆಚ್ಚಳ ಮಾಡಿತ್ತು. ಈ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ವರ್ಗ ಮಾಡುತ್ತಿದ್ದೇವೆ. ಮೇವಿನ ದರ, ಪಶು ಆಹಾರ ಸಹಿತ ಇತರೆ ಉತ್ಪನ್ನಗಳ ದರ ಏರಿಕೆ ಕಾರಣದಿಂದ ಪ್ರೋತ್ಸಾಹಧನ ಹೆಚ್ಚಿಸುವ ಬೇಡಿಕೆ ಇದೆ. ಈ ಹಿಂದೆ ನಾವೇ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರೋತ್ಸಾಹಧನ ₹7ಗೆ ಹೆಚ್ಚಳ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ಕರ್ನಾಟಕದಲ್ಲಿ ಸದ್ಯ 16 ಹಾಲು ಒಕ್ಕೂಟಗಳ ವ್ಯಾಪ್ತಿಯ 9 ಲಕ್ಷ ರೈತರು ನಿತ್ಯ ಹಾಲು ಪ್ರೋತ್ಸಾಹಧನದ ಲಾಭ ಪಡೆಯುತ್ತಿದ್ದಾರೆ. ಪ್ರತಿ ವರ್ಷ ₹1900 ಕೋಟಿಯನ್ನು ರೈತರ ನೇರ ಖಾತೆಗೆ ವರ್ಗಾಯಿಸಲಾಗುತ್ತಿದೆ. ಪ್ರತಿ ನಿತ್ಯ ₹2 ಗೆ ಏರಿಕೆಯಾದರೆ ವರ್ಷಕ್ಕೆ ₹730 ಪ್ರೋತ್ಸಾಹಧನ ಏರಿಕೆಯಾಗಲಿದೆ. ಸದ್ಯ ರೈತರಿಗೆ ಪ್ರತಿ ಲೀಟರ್ಗೆ ₹38ವರೆಗೂ ದರ ಸಿಗುತ್ತಿದೆ.
‘ಈಗಾಗಲೇ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್)ಯಿಂದಲೂ ಪ್ರೋತ್ಸಾಹಧನ ಏರಿಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಸ್ಪಂದನೆಯೂ ಸಿಕ್ಕಿದೆ’ ಎಂದು ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದರು.
18 ವರ್ಷದ ಹಿಂದೆ ಆರಂಭ: ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದಲೇ 2008ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿ ಲೀಟರ್ ಹಾಲಿಗೆ ₹2 ಪ್ರೋತ್ಸಾಹ ಧನ ನೀಡುವ ಯೋಜನೆಗೆ ಚಾಲನೆ ನೀಡಿದರು.
2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಪ್ರೋತ್ಸಾಹಧನವನ್ನು ₹4 ಗೆ ಏರಿಸಿದರು. 2016ರಲ್ಲಿ ಇದನ್ನು ₹5 ಗೆ ಏರಿಕೆ ಮಾಡಲಾಗಿತ್ತು. ಅಲ್ಲಿಂದ ದರ ಹೆಚ್ಚಿಸುವ ಬೇಡಿಕೆಯಿದ್ದರೂ ಹೆಚ್ಚಳ ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.