ಬೆಂಗಳೂರು: ‘ನಾಡಗೀತೆಗೆಮೈಸೂರು ಅನಂತಸ್ವಾಮಿ ಸಂಯೋಜಿಸಿರುವ ಧಾಟಿಯನ್ನೇ ಅನುಷ್ಠಾನಕ್ಕೆ ತರಬೇಕು’ ಎಂದುಸುಗಮ ಸಂಗೀತ ಕಲಾವಿದರ ಬಳಗ ಆಗ್ರಹಿಸಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದಸದಸ್ಯ ಹಾಗೂ ಲಹರಿ ಸಂಸ್ಥೆಯ ವೇಲು, ‘ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯಲ್ಲಿ ನಾಡಗೀತೆಧಾಟಿ ನಮ್ಮ ಸಂಸ್ಥೆಯಲ್ಲೇ ದಾಖಲಾಯಿತು. ಧ್ವನಿಸುರುಳಿ ಸಮಯದ ದೃಷ್ಟಿಯಿಂದ ಕೆಲವು ಚರಣಗಳನ್ನು ಬಿಡಲಾಗಿತ್ತು’ ಎಂದರು.
ಗಾಯಕಿ ಬಿ.ಕೆ.ಸುಮಿತ್ರ, ‘ಸರ್ಕಾರ ಕಾಲಹರಣ ಮಾಡದೆ, ಅನಂತಸ್ವಾಮಿ ಸಂಯೋಜಿಸಿರುವ ಧಾಟಿಯನ್ನೇ ನಾಡಗೀತೆಗೆ ಅಂತಿಮಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಎಚ್.ಆರ್.ಲೀಲಾವತಿ ಸಮಿತಿಯುಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯ ಧಾಟಿಯನ್ನು ನಾಡಗೀತೆಗೆ ಅಳವಡಿಸುವುದು ಸೂಕ್ತ ಎಂದು ಶಿಫಾರಸು ಮಾಡಿದೆ. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಂತಹವರ ಮಾತಿಗೆ ಕಿವಿಗೊಡದೆ, ನಾಡಗೀತೆಗೆಮೈಸೂರು ಅನಂತಸ್ವಾಮಿ ಧಾಟಿ ಅನುಷ್ಠಾನಗೊಳಿಸಬೇಕು’ ಎಂದುಸುಗಮ ಸಂಗೀತ ಕಲಾವಿದರ ಬಳಗದ ಸದಸ್ಯರು ಆಗ್ರಹಿಸಿದರು.
ಸಂಗೀತ ನಿರ್ದೇಶಕ ವಿ.ಮನೋಹರ್, ಗಾಯಕ ಗರ್ತಿಕೆರೆ ರಾಘಣ್ಣ, ಲಯ ವಾದ್ಯಗಾರ ಎಸ್.ಬಾಲಿ, ಗೋಪಿ, ಸುಗಮ ಸಂಗೀತ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ, ಗಾಯಕ ಆನಂದ ಮಾದಲಗೆರೆ, ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.