ADVERTISEMENT

ಒಳನೋಟ ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 12:40 IST
Last Updated 7 ಆಗಸ್ಟ್ 2022, 12:40 IST
ಮೆಹಬೂಬ್ ಮಠದ, ಕೊಪ್ಪಳ
ಮೆಹಬೂಬ್ ಮಠದ, ಕೊಪ್ಪಳ   

‘ಬಡವರ ಹಣ: ಬಲಾಢ್ಯರ ಕಲ್ಯಾಣ!’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಆಗಸ್ಟ್‌ 7) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

***

‘ಹಗಲು ದರೋಡೆಗೆ ಕಡಿವಾಣ ಬೀಳಲಿ’

ADVERTISEMENT

ತಳ ಸಮುದಾಯದ ಅಭಿವೃದ್ಧಿಗೆ ಸ್ಥಾಪಿಸಿರುವ ನಿಗಮ ಮಂಡಳಿಗಳ ಯೋಜನೆ ಮತ್ತು ಅನುದಾನಗಳನ್ನು ಜನಪ್ರತಿನಿಧಿಗಳು ಕನ್ನ ಹಾಕಿ ತಲೆಮಾರುಗಳಿಗಾಗುವಷ್ಟು ಹಣವನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ನಿಗಮ ಮಂಡಳಿಗಳಲ್ಲಿರುವ ದಲ್ಲಾಳಿಗಳ ಕೂಟವನ್ನು ನಿಯಂತ್ರಣ ಮಾಡಬೇಕು. ನಿಜವಾದ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವ ಕೆಲಸವಾಗಬೇಕು. ಈ ಕುರಿತು ಜಾಗೃತಿ ಮೂಡಿಸಬೇಕು.

–ಮೆಹಬೂಬ್ ಮಠದ, ಕೊಪ್ಪಳ

***

‘ದಲ್ಲಾಳಿಗಳ ಹಾವಳಿ ತಪ್ಪಿಸಿ’

ಶೋಷಿತ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಕೆಲ ನಿಗಮಗಳು ನಿಂತರವಾಗಿ ಸೇವೆ ಸಲ್ಲಿಸುತ್ತಿವೆ. ಈ ಸೌಲಭ್ಯಗಳು ನೇರವಾಗಿ ಬಡವರಿಗೆ ತಲುಪದೇ ದಲ್ಲಾಳಿಗಳಿಗೆ ತಲುಪುತ್ತಿರುವುದು ಖಂಡನೀಯ. ಜಾತಿವಾರು ರಚನೆಯಾಗಿರುವ ನಿಗಮಗಳ ಅನುದಾನ ಮತ್ತು ಯೋಜನೆಗಳಿಗೆ ಬಲಾಢ್ಯರು ಕನ್ನ ಹಾಕುತ್ತಿದ್ದಾರೆ. ಬಡವರ ಹಣವನ್ನು ದಲ್ಲಾಳಿಗಳು ಲಪಟಾಯಿಸುತ್ತಿದ್ದಾರೆ. ಸರ್ಕಾರದ ನಿಗಮಗಳು ಬಡವರ ಮನೆಯ ದೀಪ ಬೆಳಗಿಸಲು ಸೃಷ್ಟಿಸಲಾಗಿದೆ. ಆದರೆ, ಈ ನಿಗಮಗಳು ದಲ್ಲಾಳಿಗಳಿಗೆ ವರವಾಗಿರುವುದು ದುರಂತ.

–ಹರೀಶ್, ರಾಮನಗರ

***

ನಿಗಮಗಳ ಪಾರದರ್ಶಕತೆಯಿಂದ ಕೆಲಸ ಮಾಡಲಿ

ಜಾತಿವಾರು ಅಭಿವೃದ್ಧಿ‌ ನಿಗಮಗಳು ಬಲಾಢ್ಯರನ್ನು ಮತ್ತು ಜನಪ್ರತಿನಿಧಿಗಳನ್ನು ಅಭಿವೃದ್ಧಿಗೊಳಿಸುವ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ ಬದಲಾಗಿವೆ. ಹಳ್ಳಿಯಲ್ಲಿರುವ ಬಡವರಿಗೆ ನಿಗಮಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ. ಈ ಯೋಜನೆಗಳು ಕೆಲವೇ ಜನರಿಗೆ ತಲುಪುತ್ತಿವೆ. ಬಜೆಟ್‌ನಲ್ಲಿ ಘೋಷಣೆಯಾಗುವ ಕೋಟ್ಯಂತರ ಹಣ ಯಾರ ಬೊಕ್ಕಸು ತುಂಬಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ನಿಗಮಗಳಲ್ಲಿ ದೊರೆಯುವ ಯೋಜನೆಗಳು ಬಡವರಿಗೆ ತಲುಪಿಸುವ ಪಾರದರ್ಶಕ ಕೆಲಸವಾಗಬೇಕು.

–ಲಕ್ಷ್ಮಣ ಅಮರಾಪುರ, ಕನ್ನಡ ವಿಶ್ವವಿದ್ಯಾಲಯ ಹಂಪಿ

***

‘ಮತ ಸೆಳೆಯಲು ನಿಗಮಗಳ ಸ್ಥಾಪನೆ’

ಮತಗಳನ್ನು ಸೆಳೆಯುವ ಏಕೈಕ ರಾಜಕೀಯ ಉದ್ದೇಶದಿಂದ ನಿಗಮ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಈ ಜಾತಿವಾರು ನಿಗಮಗಳ ಅವಶ್ಯಕತೆ ಇಲ್ಲ. ಇವುಗಳ ಸ್ಥಾಪನೆಯಿಂದ ಭ್ರಷ್ಟಾಚಾರ ವಿಸ್ತರಿಸಿದೆ. ಮುಂಬರುವ ಸರ್ಕಾರಗಳು ಇವುಗಳನ್ನು ತೆಗೆದು ಹಾಕುವ ಕೆಲಸ ಮಾಡಬೇಕು. ಆದರೆ ಈ ದುಸ್ಸಾಹಸಕ್ಕೆ ಯಾರು ಕೈ ಹಾಕುವುದಿಲ್ಲ.

-ಪುಟ್ಟೆಗೌಡ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.