ADVERTISEMENT

ವಿಧಾನಸಭೆ ಕಲಾಪ ಗುರುವಾರಕ್ಕೆ ಮುಂದೂಡಿಕೆ | ರಾಜ್ಯ ರಾಜಕಾರಣ ಇಂದು ಏನೆಲ್ಲಾ ಆಯ್ತು

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 9:56 IST
Last Updated 15 ಜುಲೈ 2019, 9:56 IST
   

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಎದುರಾಗಿರುವ ಅಸ್ಥಿರತೆ, ಬಂಡಾಯ ನಿರ್ಣಾಯಕ ಘಟ್ಟತಲುಪಿದೆ. ವಿಶ್ವಾಸ ಮತ ಯಾಚಿಸುವುದಾಗಿ ಸದನದಲ್ಲಿ ಹೇಳಿರುವ ಸಿಎಂ ಕುಮಾರಸ್ವಾಮಿ ಅವರು ಇಂದು ಏನು ಮಾಡಲಿದ್ದಾರೆ? ಮೈತ್ರಿ ನಾಯಕರು ಅತೃಪ್ತರ ಮುನಿಸು ಶಮನ ಮಾಡುವರೇ? ಅಧಿಕಾರಕ್ಕೇರಲೇ ಬೇಕೆಂದುಕೊಂಡಿರುವಬಿಜೆಪಿನಾಯಕರ ಆಸೆ ಈಡೇರುವುದೇ? ಬಂಡಾಯಗಾರರು ರಾಜ್ಯಕ್ಕೆ ಬರುವರೇ? ಈ ಎಲ್ಲ ಪ್ರಶ್ನೆಗಳಿಗೂಇಂದು ಉತ್ತರ ಸಿಗುವ ಸಾಧ್ಯತೆಗಳಿವೆ. ರಾಜ್ಯ ರಾಜಕೀಯ ಮುಂದೇನಾಗಲಿದೆ ಎಂಬುದರ ಸ್ಪಷ್ಟ ಚಿತ್ರಣ ಇಂದು ದೊರೆಯುವ ಸಾಧ್ಯತೆಗಳು ನಿಚ್ಚಳವಾಗಿದೆ.

2.50–ವಿಧಾನಸಭೆ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿದೆ ಎಂದು ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

2.40–ವಿಧಾನಸಭೆ ಕಲಾಪ ಆರಂಭ

ADVERTISEMENT

2.23–ವಿಧಾನಸಭೆ ಕಲಾಪ ಆರಂಭಕ್ಕೆ ಕ್ಷಣಗಣನೆ

1.58– ಎಂದು ವಿಶ್ವಾಸಮತ? ಕಲಾಪ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆ

ವಿಶ್ವಾಸಮತ ಪ್ರಸ್ತಾವವನ್ನು ವಿಧಾನಸಭೆಯಲ್ಲಿಎಂದು ಮಂಡಿಸಬೇಕು ಎಂಬ ಬಗ್ಗೆ ಕಲಾಪ ಸಮಿತಿ ಮೈತ್ರಿ ನಾಯಕರು, ಬಿಜೆಪಿ ನಾಯಕರು ಮತ್ತು ಸ್ಪೀಕರ್ ನಡುವೆ ಸುದೀರ್ಘ ಚರ್ಚೆ ನಡೆಯಿತು.

ಇಂದೇ (ಸೋಮವಾರ) ವಿಶ್ವಾಸಮತ ಕೋರಬೇಕು ಎಂದು ಬಿಜೆಪಿ,ಶುಕ್ರವಾರ ಅಂತ ಮೈತ್ರಿ ನಾಯಕರು ಪಟ್ಟು ಹಿಡಿದರು.ಮಂಗಳವಾರ ಸುಪ್ರೀಂಕೋರ್ಟ್‌ ತೀರ್ಪು ಗಮನಿಸಿದ ನಂತರ ವಿಶ್ವಾಸಮತ ಕೋರುವುದು ಒಳಿತು ಎಂದು ಸ್ಪೀಕರ್ ಅಭಿಪ್ರಾಯಪಟ್ಟರು. ಕೊನೆಗೆ ಅವರೇಗುರುವಾರ ಬೆಳಿಗ್ಗೆ 11ಕ್ಕೆ ವಿಶ್ವಾಸಮತ ಮಂಡನೆ ಪ್ರಸ್ತಾವ ಮಂಡಿಸುವ ವಿಚಾರ ಅಂತಿಮಗೊಳಿಸಿದರು ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

1.57–ತಮ್ಮ ರಾಜೀನಾಮೆ ಆಂಗೀಕರಿಸುವಂತೆ ಸ್ಪೀಕರ್‌ಗೆ ಸೂಚಿಸಬೇಕು ಎಂದು ಈಗಾಗಲೇ ಅರ್ಜಿ ಸಲ್ಲಿಸಿರುವ 10 ಮಂದಿ ಅತೃಪ್ತರ ಜೊತೆಗೆಕಾಂಗ್ರೆಸ್‌ನ ಇತರ ಐವರು ಅತೃಪ್ತ ಶಾಸಕರ ಮನವಿ ಆಲಿಸಲು ಸುಪ್ರೀಂಕೋರ್ಟ್‌ ಸೋಮವಾರ ಒಪ್ಪಿಕೊಂಡಿತು.

1.56– ಗುರುವಾರ 11 ಗಂಟೆಗೆ ವಿಶ್ವಾಸಮತ ಕೋರುತ್ತೇವೆ. ಗೆಲ್ಲುವ ವಿಶ್ವಾಸ ಇರುವುದರಿಂದಲೇ ನಾವು ವಿಶ್ವಾಸಮತ ಕೋರ್ತೀವಿ ಅಂತ ಹೇಳಿದ್ದು. ವಿಧಾನಸೌಧದಲ್ಲಿಸಿದ್ದರಾಮಯ್ಯ ಹೇಳಿಕೆ.

1.53– ಗುರುವಾರ ವಿಶ್ವಾಸಮತ ಕೋರಲು ಮುಖ್ಯಮಂತ್ರಿ ಒಪ್ಪಿಗೆ. ಕಲಾಪ ಸಲಹಾ ಸಮಿತಿಯಲ್ಲಿ ನಿರ್ಧಾರ.

1.43– ಕೋರ್ಟ್‌ ತೀರ್ಪಿನ ನಂತರ ದಿನಾಂಕ ನಿಗದಿಪಡಿಸಲು ಸ್ಪೀಕರ್ ಒಲವು. ಬುಧವಾರ ಅಥವಾ ಗುರುವಾರ ವಿಶ್ವಾಸಮತ ಯಾಚನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಲೋಚನೆ.

1.43– ವಿಶ್ವಾಸಮತ ಯಾಚನೆಗೆ ಬಿಜೆಪಿ ಆಗ್ರಹ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ವಿಶ್ವಾಸಮತ ವಿಚಾರ ಪ್ರಸ್ತಾಪಿಸಿದ ಬಿಜೆಪಿ ತಡ ಮಾಡಬಾರದು ಎಂದು ಒತ್ತಾಯಿಸಿತು.

1.35– ವಿಧಾನಸಭೆಯಲ್ಲಿ ಬಿಜೆಪಿ ನಾಯಕರೊಂದಿಗೆ ಕೈಕುಲುಕಿ ಸಚಿವ ಜಿ.ಟಿ.ದೇವೇಗೌಡ ಮಾತುಕತೆ

1.30– ವಿಧಾನಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ. ಬಿಜೆಪಿಯಿಂದ ವಿಶ್ವಾಸಮತ ಯಾಚನೆಗೆ ಪಟ್ಟು

1.00–ವಿಧಾನಪರಿಷತ್‌ ಕಲಾಪ ಆರಂಭ: ವಿರೋಧ ಪಕ್ಷ ಬಿಜೆಪಿಯಿಂದ ಗದ್ದಲ

12.15–ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಪತ್ರ ನೀಡಿದ ಬಿಜೆಪಿ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಇಂದು ಸ್ಪೀಕರ್‌ಗೆ ಅವಿಶ್ವಾಸ ಗೊತ್ತುವಳಿ ಪತ್ರನೀಡಿದೆ. ಸಂಸದೀಯ ಕಾರ್ಯಕಲಾಪಗಳ ಸಮಿತಿ 12.30ಕ್ಕೆ ಸಭೆ ಸೇರಲಿದ್ದು, ಅಲ್ಲಿ ಈ ಬಗ್ಗೆ ಚರ್ಚೆಯಾಗಿ, ಸಮಯ ನಿಗದಿಯಾಗಲಿದೆ ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ರವಿಕುಮಾರ್‌ ಹೇಳಿದ್ದಾರೆ.

11.40–ವಿಧಾನಸೌಧದಲ್ಲಿ ಸೌಮ್ಯಾ ರೆಡ್ಡಿ: ಕಾಂಗ್ರೆಸ್‌ ಶಾಸಕರೂ ಆಗಮನ

ತಾಜ್‌ ವಿವಾಂತಾ ಹೋಟೆಲ್‌ನಲ್ಲಿ ತಂಗಿದ್ದ ಕಾಂಗ್ರೆಸ್‌ ಶಾಸಕರು ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದರು. ಭಿನ್ನಮತೀಯ ನಾಯಕ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರೂ ಕಲಾಪಕ್ಕೆ ಬಂದರು.ಇದಕ್ಕೂ ಮೊದಲು ಸಿದ್ದರಾಮಯ್ಯ ಅವರು ಹೋಟೆಲ್‌ನಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸಿದರು.

11.40–ರಾಜೀನಾಮೆ ಇತ್ಯರ್ಥ ಕೋರಿದ್ದ ಇತರ ಐವರು ಶಾಸಕರ ಅರ್ಜಿ ವಿಚಾರಣೆಗೆ ಸಮ್ಮತಿ

ವಿಧಾನಸಭೆ ಸದಸ್ಯತ್ವಕ್ಕೆ ನೀಡಿದ್ದರಾಜೀನಾಮೆ ಅಂಗೀಕಾರಿಸಲು ಸ್ಪೀಕರ್‌ ವಿಳಂಬ ಮಾಡುತ್ತಿದ್ದಾರೆ ಎಂದು ಶಾಸಕಎಂಟಿಬಿ ನಾಗರಾಜ್, ಮುನಿರತ್ನ, ಆನಂದ್ ಸಿಂಗ್, ಸುಧಾಕರ್ ಮತ್ತು ರೋಷನ್ ಬೇಗ್ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮಿತಿಸಿದೆ. ಈ ಹಿಂದೆ 10 ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆಯೇ ಈ ಅರ್ಜಿಯೂ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.

11.23–ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಶಾಸಕರು

ರಾಜಾನುಕುಂಟೆ ಸಮೀಪದ ರಮಡರೆಸಾರ್ಟ್‌ನಲ್ಲಿ ಆಶ್ರಯ ಪಡೆದ್ದ ಬಿಜೆಪಿ ಶಾಸಕರು ಬಸ್‌ನಲ್ಲಿ ವಿಧಾನಸೌಧಕ್ಕೆ ಆಗಮಿಸಿದರು.

11.10–ಅತೃಪ್ತ ಶಾಕರಿಂದ ಮುಂಬೈ ಪೊಲೀಸರಿಗೆ ಮತ್ತೊಂದು ಪತ್ರ!

ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲ್‌ನಲ್ಲಿ ಆಶ್ರಯ ಪಡೆದಿರುವ ಅತೃಪ್ತ ಶಾಸಕರು ಮುಂಬೈ ಪೊಲೀಸರಿಗೆ ಸೋಮವಾರ ಮತ್ತೊಂದು ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಮ್‌ ನಬಿ ಆಜಾದ್‌ ಅವರು ತಮ್ಮನ್ನು ಸಂಪರ್ಕಿಸುವ ಸಾಧ್ಯತೆಗಳಿವೆ. ಅವರ ಬಳಿ ಮಾತನಾಡಲು ನಮಗೆ ಇಚ್ಛೆ ಇಲ್ಲ. ಹಾಗಾಗಿ ನಮಗೆ ರಕ್ಷಣೆ ಒದಗಿಸಬೇಕು ಎಂದು ಅವರು ಪೊಲೀಸರಲ್ಲಿ ಕೋರಿದ್ದಾರೆ.

ಈ ಬಾರಿ ಪತ್ರದಲ್ಲಿ ಎಂಟಿಬಿ ನಾಗರಾಜ್‌, ಮುನಿರತ್ನ ಅವರೂ ಸಹಿ ಮಾಡಿದ್ದಾರೆ.

10.40–ಶಾಸಕರೇ ಸ್ವತಃ ರಾಜೀನಾಮೆ ನೀಡಿರುವಾಗ ಪರಿಶೀಲನೆ ಏಕೆ?

ಕುಮಾರಸ್ವಾಮಿ ಅವರು ವಿಶ್ವಾಸಮತ ಮಂಡಿಸಬೇಕು ಎಂಬ ನಮ್ಮ ಬೇಡಿಕೆಗೆ ನಾವು ಬದ್ಧರಾಗಿದ್ದೇವೆ. ಕುಮಾರಸ್ವಾಮಿ ಮತ್ತು ಸ್ಪೀಕರ್‌ ಅವರ ನಡೆ ಒಪ್ಪತಕ್ಕದ್ದಲ್ಲ. ಶಾಸಕರೇ ಸ್ವತಃ ರಾಜೀನಾಮೆ ನೀಡಿರುವಾಗ ಅದರಲ್ಲಿ ಪರಿಶೀಲನೆ ಮಾಡಬೇಕಾದ್ದು ಏನಿದೆ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನೆ ಮಾಡಿದ್ದಾರೆ.

10.35–ಬೆಂಗಳೂರಿನತ್ತ ಹೊರಟ ಬಿಜೆಪಿ ಶಾಸಕರು

ಬೆಂಗಳೂರು ಹೊರವಲಯದ, ರಾಜಾನುಕುಂಟೆ ಸಮೀಪದ ರಮಡ ಹೋಟೆಲ್‌ನಲ್ಲಿ ಆಶ್ರಯ ಪಡೆದಿದ್ದ ಬಿಜೆಪಿ ಶಾಸಕರು ವಿಧಾನ ಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ.

10.30–ಸ್ಪೀಕರ್ ವರ್ತನೆ ಕಾಂಗ್ರೆಸ್ ಏಜೆಂಟ್‌ ಥರ ಇದೆ: ಶೋಭಾ ಕರಂದ್ಲಾಜೆ

ಸ್ಪೀಕರ್ ರಮೇಶ್‌ಕುಮಾರ್ ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ವರ್ತಿಸುತ್ತಿಲ್ಲ. ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ನೇರ ಆರೋಪ ಮಾಡಿದರು. ರಾಜ್ಯ ರಾಜಕಾರಣದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ಪೀಕರ್‌ ರಮೇಶ್‌ಕುಮಾರ್ ಈ ಹಿಂದೆ ವೇಶ್ಯೆಯರ ಬಗ್ಗೆ ಮಾತನಾಡಿದ್ರು. ಈಗ ನೃತ್ಯಗಾರರ ಬಗ್ಗೆ ಕೇವಲವಾಗಿ ಮಾತನಾಡ್ತಿದ್ದಾರೆ. ರಾಷ್ಟ್ರ ಲಾಂಛನದ ಅಡಿಯಲ್ಲಿ ಕೆಲಸ ಮಾಡುವ ಸ್ಪೀಕರ್, ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.