ಬೆಂಗಳೂರು: ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಲು ದೋಸ್ತಿ ಸರ್ಕಾರಕ್ಕೆ ಇನ್ನು ಎರಡು ದಿನ ಮಾತ್ರ ಉಳಿದಿದ್ದು, ಅತೃಪ್ತ ಶಾಸಕರನ್ನು ಸಂಪರ್ಕಿಸಲು ಪ್ರಯತ್ನ ಮುಂದುವರಿದಿದೆ.
ಮುಂಬೈಯ ಅಜ್ಞಾತ ಸ್ಥಳದಲ್ಲಿರುವ ಶಾಸಕರನ್ನು ಹೇಗಾದರೂ ಮಾಡಿ ಸಂಪರ್ಕಿಸಬೇಕು. ವಿಶ್ವಾಸ ಮತದ ಮತದಾನದ ವೇಳೆ ಭಾಗವಹಿಸಬೇಕು ಎಂದು ಅವರ ಮನವೊಲಿಸುವ ಪ್ರಯತ್ನವನ್ನು ಜೆಡಿಎಸ್ ಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಸಹಾಯ ಪಡೆದು ಮೊದಲಾಗಿ ಶಾಸಕರು ಇರುವ ಸ್ಥಳ ಪತ್ತೆ ಹಚ್ಚಬೇಕು. ಬಳಿಕ ಅವರ ಮನವೊಲಿಸಬೇಕು ಎಂಬ ಚಿಂತನೆಯಲ್ಲಿ ನಾಯಕರಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಶಾಸಕರು ನೆಲೆಸಿರುವ ಯಶವಂತಪುರದ ತಾಜ್ ವಿವಾಂತ ಹೋಟೆಲ್ ನಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಣತಂತ್ರ ರೂಪಿಸಲು ಸಿದ್ಧತೆ ನಡೆದಿದೆ.
ಮತ್ತೊಂದೆಡೆಯಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮನೆಯಲ್ಲಿ ಸಹ ಮುಂದಿನ ನಡೆಗಳ ಕುರಿತಂತೆ ಗಹನವಾದ ಸಮಾಲೋಚನೆ ನಡೆಯುತ್ತಿದೆ.
ರಾಜ್ಯಪಾಲರ ಸಲಹೆಯನ್ನು ಧಿಕ್ಕರಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವಾಲಯಕ್ಕೆ ವಿವರವಾದ ವರದಿ ಸಲ್ಲಿಸಲಾಗಿದೆ. ಇದರ ಪರಿಣಾಮಗಳ ಬಗ್ಗೆ ಸಹ ಎರಡೂ ಪಕ್ಷಗಳಲ್ಲಿ ಸಮಾಲೋಚನೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.