ADVERTISEMENT

ಸಚಿವ ಶ್ರೀರಾಮುಲು ಧರಣಿ ಸರ್ಕಾರದ ಅಯೋಗ್ಯತನಕ್ಕೆ ಹಿಡಿದ ಕನ್ನಡಿ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2022, 10:27 IST
Last Updated 3 ನವೆಂಬರ್ 2022, 10:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರವಾಹದಲ್ಲಿ ಕೊಚ್ಚಿಹೋದ ತುಂಗಭದ್ರಾ ಕೆಳಹಂತದ ಕಾಲುವೆಯ ಪಿಲ್ಲರ್‌ ರಿಪೇರಿ ಕೆಲಸ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ಬುಧವಾರ ಇಡೀ ರಾತ್ರಿ ಕಾಲುವೆ ಬಳಿ ಕಾಲಕಳೆದ ‘ಹೈ ಡ್ರಾಮಾ’ಕ್ಕೆ ವೇದಾವತಿ (ಹಗರಿ) ನದಿ ಸಾಕ್ಷಿಯಾಯಿತು.

ಇದೇ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಸಾಮರ್ಥ್ಯವನ್ನು ಎತ್ತಿ ತೋರಿಸಲು ಸಚಿವ ಶ್ರೀರಾಮುಲು ಅವರು ಬಳ್ಳಾರಿ ವೇದಾವತಿ ನದಿ ಬಳಿ ಪ್ರತಿಭಟನೆ ಕುಳಿತಿದ್ದಾರೆ’ ಎಂದು ವ್ಯಂಗ್ಯವಾಡಿದೆ.

ADVERTISEMENT

‘ಅಧಿಕಾರಿಗಳು ಸಿಎಂ ಮಾತು ಕೇಳುವುದಿಲ್ಲ, ಸಚಿವರಿಗೂ, ಸಿಎಂಗೂ ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ, ಇವರ ಧರಣಿ ಸರ್ಕಾರದ ಅಯೋಗ್ಯತನಕ್ಕೆ ಹಿಡಿದ ಕನ್ನಡಿ’ ಎಂದು ಕಾಂಗ್ರೆಸ್‌ ಗುಡುಗಿದೆ.

ರಾಹುಲ್‌ ಗಾಂಧಿಯವರ ‘ಭಾರತ್‌ ಜೋಡೊ ಯಾತ್ರೆ‘ ಮತ್ತು ಬಿಜೆಪಿ ‘ಜನ ಸಂಕಲ್ಪ ಯಾತ್ರೆ‘ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ರಾಜಕೀಯ ಗರಿಗೆದರಿದ್ದು, ತುಂಗಭದ್ರಾ ಎಲ್ಎಲ್‌ಸಿ ಕಾಲುವೆಯಲ್ಲಿ ನೀರು ಹರಿಸುವ ವಿಚಾರ ಮಂಗಳವಾರ, ಬುಧವಾರ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿತ್ತು.

ಈ ಸ್ಥಳಕ್ಕೆ ಅಕ್ಟೋಬರ್‌ 29ರಂದು ನಾಗೇಂದ್ರ ಭೇಟಿ ನೀಡಿ, ನವೆಂಬರ್‌ 1ರಿಂದ ನೀರು ಬಿಡಿಸುವುದಾಗಿ ರೈತರಿಗೆ ಭರವಸೆ ನೀಡಿದ್ದರು.

ಈ ಮಧ್ಯೆ, ಸಚಿವ ಬಿ.ಶ್ರೀರಾಮುಲು ನವೆಂಬರ್‌ 1ರಂದು ಮಂಗಳವಾರ ಮಧ್ಯಾಹ್ನ ಸ್ಥಳಕ್ಕೆ ಬಂದಿದ್ದು, ಕಾಲುವೆಗೆ ನೀರು ಹರಿಸುವವರೆಗೆ ಅಲ್ಲೇ ಮೊಕ್ಕಾಂ ಹೂಡುವುದಾಗಿ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.