ADVERTISEMENT

ಆನಂದ ಸಿಂಗ್ ವಿರುದ್ಧದ ಪ್ರಕರಣಗಳು ರಾಜಕೀಯ ಪಿತೂರಿ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 6:06 IST
Last Updated 19 ಫೆಬ್ರುವರಿ 2020, 6:06 IST
ಶ್ರೀರಾಮುಲು (ಸಂಗ್ರಹ ಚಿತ್ರ)
ಶ್ರೀರಾಮುಲು (ಸಂಗ್ರಹ ಚಿತ್ರ)   

ರಾಯಚೂರು: ‘ಸಚಿವ ಆನಂದ ಸಿಂಗ್ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಅವರ ವಿರುದ್ಧ ಕಾಂಗ್ರೆಸ್ ಆಡಳಿತವಿದ್ದ ಅವಧಿಯಲ್ಲಿ ರಾಜಕೀಯ ಪಿತೂರಿಯಿಂದ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಮಾಡಿದ ರಾಜಕೀಯ ಪಿತೂರಿಯಿಂದಾಗಿ ಬಳ್ಳಾರಿಗೆ ಕೆಟ್ಟ ಹೆಸರು ಬಂದಿದೆ. ರಾಜಕೀಯ ಉದ್ದೇಶಕ್ಕಾಗಿಯೇ ಆನಂದ ಸಿಂಗ್ ಹಾಗೂ ಜನಾರ್ದನ ರೆಡ್ಡಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ’ ಎಂದರು.

‘ಪ್ರಾಮಾಣಿಕರಾದ ಆನಂದ ಸಿಂಗ್ ಅವರು ಅರಣ್ಯ ಸಚಿವರಾಗಿ ಮುಂದುವರಿಯುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಬಿಜೆಪಿಯಲ್ಲಿ ಯಾವುದೇ ಆಂತರಿಕ ಕಲಹವಿಲ್ಲ. ಬಜೆಟ್ ಕುರಿತು ಚರ್ಚೆಗಾಗಿ ಕೆಲವು ಶಾಸಕರು ಸೇರಿ ಸಭೆ ಮಾಡಿದ್ದಾರೆ’ ಎಂದು ರಾಮುಲು ಹೇಳಿದರು.

‘ಸದನ ಬಹಿಷ್ಕರಿಸಿರುವ ಕಾಂಗ್ರೆಸ್ ಪಕ್ಷವು ಭಯೋತ್ಪಾದನೆಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದೆ. ದೇಶವನ್ನು ಬೇರೆಯವರಿಗೆ ಒತ್ತೆ ಇಟ್ಟು, ಪಾಕಿಸ್ತಾನ ಪರ ಜೈಕಾರ ಹಾಕುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಇದನ್ನು ನೋಡಿಕೊಂಡು ಬಿಜೆಪಿ ಸರ್ಕಾರ ಸುಮ್ಮನಿರುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.