ADVERTISEMENT

ಡಿ.ಕೆ.ಶಿವಕುಮಾರ್ ‘ಏಕಾಂಗಿ’ ಸಭೆ: ಸಿದ್ದರಾಮಯ್ಯ ಆಪ್ತರ ಅಸಮಾಧಾನ?

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 19:45 IST
Last Updated 25 ಡಿಸೆಂಬರ್ 2021, 19:45 IST
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌    

ಬೆಂಗಳೂರು: ಮೇಕೆದಾಟು ಯೋಜನೆ ತ್ವರಿತಗೊಳಿಸಲು ಆಗ್ರಹಿಸಿ ಜ. 9ರಿಂದ 10 ದಿನ ಹಮ್ಮಿಕೊಳ್ಳಲಿರುವ ಪಾದಯಾತ್ರೆಯ ಭಾಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಜಿಲ್ಲಾಮಟ್ಟದಲ್ಲಿ ಪಕ್ಷದ ಸ್ಥಳೀಯ ನಾಯಕರ ಜೊತೆ ಏಕಾಂಗಿಯಾಗಿ ಪೂರ್ವಭಾವಿ ಸಭೆ ನಡೆಸುತ್ತಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಡಿ.ಕೆ.ಶಿವಕುಮಾರ್‌ ಅವರ ನಡೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವರು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ದೂರು ನೀಡಿದ್ದಾರೆ. ಎಲ್ಲ ನಾಯಕರನ್ನು ಜೊತೆಯಾಗಿ ಕರೆದೊಯ್ಯುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದ್ದಾರೆ’ ಎಂದು ಹೇಳಲಾಗಿದೆ.

ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸದೆ ಪಕ್ಷದ ನಾಯಕರ ಜೊತೆ ಸಭೆ ನಡೆಸಲು ಶಿವಕುಮಾರ್‌ ತೆರಳಿರುವುದಕ್ಕೂ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಅಧಿವೇಶನದ ಮಧ್ಯೆ (ಡಿ. 23) ಮೈಸೂರು– ಚಾಮರಾಜನಗರ ಭಾಗದ ನಾಯಕರ ಜೊತೆ ಸಭೆ ನಡೆಸಲು ಶಿವಕುಮಾರ್‌ ಮುಂದಾಗಿದ್ದ ಬಗ್ಗೆ ಸಿದ್ದರಾಮಯ್ಯ ನೇರವಾಗಿಯೇ ಬೇಸರ ವ್ಯಕ್ತಪಡಿಸಿದ್ದರು. ‘ನಾನಿಲ್ಲದೆ ಮೈಸೂರು ಭಾಗದ ಸಭೆ ನಡೆಸಬೇಡಿ’ ಎಂದು ಸೂಚಿಸಿದ್ದರು. ‘ಜೊತೆಯಲ್ಲಿ ತೆರಳಿ ಸಭೆ ನಡೆಸದಿದ್ದರೆ ತಪ್ಪು ಸಂದೇಶ ರವಾನೆಯಾಗಲಿದೆ’ ಎಂದೂ ಖಾರವಾಗಿಯೇ ಹೇಳಿದ್ದರು.

*
ಪಾದಯಾತ್ರೆ ಮಾಡಿ ಸಿಎಂ ಆಗಬಹುದು ಎಂದು ಡಿಕೆಶಿ ಅಂದುಕೊಂಡಿದ್ದರೆ ಅದು ಬರೀ ಕನಸು. ಪಾದಯಾತ್ರೆಯ ಮೂಲಕ ಜನಬೆಂಬಲ ಗಿಟ್ಟಿಸಬಹುದು ಎಂಬುದು ಮೂರ್ಖತನ.
–ಎಸ್‌.ಟಿ.ಸೋಮಶೇಖರ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.