ಬೆಂಗಳೂರು: ಹತಾಶೆಗೊಂಡ ಹೇಡಿಯ ಕೊನೆಯ ಅಸ್ತ್ರವೇ ಅಪಪ್ರಚಾರ ಮಾಡುವುದು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೊ ಪಾದಯಾತ್ರೆ ಕುರಿತು ಬಿಜೆಪಿ ನಾಯಕರು ಟೀಕಿಸಿದ್ದರು. ಇದೀಗ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ಕಿಡಿಕಾರಿದೆ.
‘ಪ್ರಚಾರ - ತಮ್ಮ ಸಾಧನೆಗಳದ್ದಾಗಿರುತ್ತದೆ. ಅಪಪ್ರಚಾರ - ಹತಾಶೆಯದ್ದಾಗಿರುತ್ತದೆ. ಬಿಜೆಪಿ ಸರ್ಕಾರ ತನ್ನಸಾಧನೆಯ ಜಾಹೀರಾತು ನೀಡಲು ಏನೂ ಇಲ್ಲದ್ದಕ್ಕೆ ಪ್ರತಿ ದಿನವೂ ಅಪಪ್ರಚಾರದ ಜಾಹೀರಾತು ನೀಡುತ್ತಿದೆ. ಭಾರತ್ ಜೋಡೊ ಯಾತ್ರೆಯ ಯಶಸ್ಸು ಬಿಜೆಪಿಗೆ ನಿದ್ದೆಗೆಡಿಸಿರುವುದರಲ್ಲಿ ಅನುಮಾನವಿಲ್ಲ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಲ್ಪತರು ನಾಡಿನಲ್ಲಿ ಅಪಾರ ಜನಸ್ತೋಮದೊಂದಿಗೆ, ಜನ ಬೆಂಬಲದೊಂದಿಗೆ ಭಾರತ್ ಜೋಡೊ ಯಾತ್ರೆ ಸಾಗುತ್ತಿದೆ. ಈ ಜನ ಬೆಂಬಲವೇ ಒಡೆದಾಳುವವರ (ಬಿಜೆಪಿಗರ) ನಿದ್ದೆಗೆಡಿಸಿದೆ, ಹಾಗಾಗಿ ಅವರು ಅಪಪ್ರಚಾರ ಎಂಬ ಕೊನೆಯ ಅಸ್ತ್ರವನ್ನು ಹಿಡಿದಿದ್ದಾರೆ. ನಾವು ಗುರಿ ತಲುಪುವುದನ್ನು ತಡೆಯಲು ಯಾವ ಅಪಪ್ರಚಾರಗಳಿಗೂ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಸವಾಲೆಸೆದಿದೆ.
ಭ್ರಷ್ಟಾಚಾರವನ್ನೇ ಕಾಯಕ ಮಾಡಿಕೊಂಡು ಕುಂಭಕರ್ಣ ನಿದ್ದೆಯಲ್ಲಿದ್ದ ಕಮಿಷನ್ ಸರ್ಕಾರವನ್ನು ಬಡಿದೆಚ್ಚರಿಸಿ, ಜನಪರ ನೀತಿಗಳ ಜಾರಿಗೆ ಒತ್ತಡ ಹಾಕುತ್ತಾ, ಜನಪರ ಕೆಲಸ ಮಾಡುವತ್ತ ಭಾರತ್ ಜೋಡೊ ಯಾತ್ರೆ ಸಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
‘ಕರ್ನಾಟಕದ ಕಣ್ಮಣಿಯಂತಿದ್ದ ನಟ ಪುನೀತ್ ರಾಜ್ಕುಮಾರ್ ಅವರಿಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿ ಗೌರವ ನಮನ ಸಲ್ಲಿಸಿದ್ದಾರೆ. ದಶಕಗಳಿಂದ ಆತ್ಮೀಯ ಸಂಬಂಧ ಹೊಂದಿರುವ ಡಾ.ರಾಜ್ಕುಮಾರ್ ಕುಟುಂಬ ಹಾಗೂ ನೆಹರೂ ಕುಟುಂಬಗಳ ಬಾಂಧವ್ಯಕ್ಕೆ ಪುನೀತ್ರವರ ಚಿತ್ರಪಟ ಹಾಗೂ ಅವರ ನೆನಪುಗಳು ಸಾಕ್ಷಿಯಾಯ್ತು’ ಎಂದು ಕಾಂಗ್ರೆಸ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.