ಬಾಗಲಕೋಟೆ: ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಧಾರವಾಡದ ಕೋಚಿಂಗ್ ಸೆಂಟರ್ವೊಂದರ ಮಾಜಿ ನಿರ್ದೇಶಕ ಶ್ರೀಕಾಂತ ದುಂಡಪ್ಪ ಚೌರಿ ಅವರನ್ನು ಸಿಐಡಿ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದು ಬೆಂಗಳೂರಿಗೆ ವಿಚಾರಣೆಗೆ ಕರೆದೊಯ್ದಿದ್ದಾರೆ. ಶ್ರೀಕಾಂತ ಅವರನ್ನು ರಬಕವಿ–ಬನಹಟ್ಟಿ ತಾಲ್ಲೂಕಿನ ಯರಗಟ್ಟಿಯ ಯಲ್ಲಮ್ಮನ ಗುಡಿಯ ಬಳಿ ವಶಕ್ಕೆ ಪಡೆಯಲಾಗಿದೆ.
ನಾಲ್ಕು ದಿನಗಳ ಹಿಂದೆ ಮದುವೆ
ಶ್ರೀಕಾಂತ ಜಮಖಂಡಿ ತಾಲ್ಲೂಕಿನ ತೊದಲಬಾಗಿ ನಿವಾಸಿ. ಮೇ 14ರಂದು ಜಮಖಂಡಿ ನಗರದಲ್ಲಿ ಮದುವೆ ಆಗಿದ್ದರು. ಬುಧವಾರ ಮೊದಲ ರಾತ್ರಿಯ ಸಂಭ್ರಮದಲ್ಲಿದ್ದ ಅವರು ಪತ್ನಿಯ ತವರು ಬೆಳಗಾವಿ ಜಿಲ್ಲೆ ಕಾಗವಾಡಕ್ಕೆ ಹೊರಟಿದ್ದರು. ಮಾರ್ಗ ಮಧ್ಯೆ ದೇವರ ದರ್ಶನ ಪಡೆಯಲು ಯರಗಟ್ಟಿಯ ಯಲ್ಲಮ್ಮನ ಗುಡಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಶ್ರೀಕಾಂತ ಚೌರಿ ಧಾರವಾಡದ ಇನ್ಪೈರ್ ಇಂಡಿಯಾ ಹೆಸರಿನ ಕೋಚಿಂಗ್ ಸೆಂಟರ್ನ ಮಾಜಿ ನಿರ್ದೇಶಕ. ಕೋಚಿಂಗ್ ಸೆಂಟರ್ಗೆ ಪರೀಕ್ಷಾ ಸಿದ್ಧತೆಗೆ ಬರುವ ಅಭ್ಯರ್ಥಿಗಳಿಂದ ಹಣ ಪಡೆದು ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
‘ಪಿಎಸ್ಐ ಪರೀಕ್ಷೆ ನೇಮಕಾತಿ ಹಿನ್ನೆಲೆಯಲ್ಲಿ ತೊದಲಬಾಗಿಯ ವ್ಯಕ್ತಿಯೊಬ್ಬರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದಿರುವ ಬಗ್ಗೆ ಮಾಹಿತಿ ಇದೆ. ಆದರೆ ಹೆಚ್ಚಿನ ವಿಷಯ ಗೊತ್ತಿಲ್ಲ’ ಎಂದು ರಬಕವಿ–ಬನಹಟ್ಟಿ ಠಾಣೆ ಸಿಪಿಐ ಕರುಣೇಶಗೌಡ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.