ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ. ಮಳೆಯಿಂದಾಗಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ನೂರಾರು ಎಕರೆ ಜಲಾವೃತಗೊಂಡಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕೂಡ್ಲೂರು ಕ್ರಾಸ್ ಬಳಿ ನಸುಕಿನಲ್ಲಿ ದನದ ಕೊಟ್ಟಿಗೆಯ ಗೋಡೆ ಪಕ್ಕದಲ್ಲಿದ್ದ ಶೆಡ್ ಮೇಲೆ ಕುಸಿದು ಬಿದ್ದುಫರ್ವೀನ್ (4) ಹಾಗೂ ಇಷಿಕಾ (3) ಸಾವಿಗೀಡಾಗಿದ್ದಾರೆ. ಈ ಮಕ್ಕಳ ತಾಯಿ ಮೀನಾ ಬಿತ್ತು (30) ಹಾಗೂ ಮೋನಿಷಾ (35) ಗಾಯಗೊಂಡಿದ್ದಾರೆ. ನೇಪಾಳ ಮೂಲದ ಕಾರ್ಮಿಕರ ಎರಡು ಕುಟುಂಬಗಳು ಕೂಲಿ ಮಾಡಿಕೊಂಡು ಈ ಶೆಡ್ನಲ್ಲಿ ವಾಸವಿದ್ದವು. ಗಾಯಾಳುಗಳಿಗೆ ಮಾಗಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಲೆಸೋಮನಹಳ್ಳಿ ಬಳಿ ಮರ ಬಿದ್ದು, ರಂಗಶೆಟ್ಟಿ (40) ಮೃತಪಟ್ಟಿದ್ದರೆ, ವಿಜಯಪುರ ಜಿಲ್ಲೆ ಕೊಲ್ಹಾರದ ಬಳಿ ಹಳ್ಳದ ಹರಿವಿನಲ್ಲಿ ಸಿಲುಕಿಕೊಂಡಿದ್ದ ಎಮ್ಮೆಗಳನ್ನು ರಕ್ಷಿಸಲು ಹೋಗಿದ್ದ ರೈತ ನಂದಪ್ಪ ಸಂಗಪ್ಪ ಸೊನ್ನದ (65) ಶನಿವಾರ ಸಂಜೆ ಸಾವಿಗೀಡಾಗಿದ್ದು, ಭಾನುವಾರ ಶವ ಪತ್ತೆಯಾಗಿದೆ.
ತುಂಗಭದ್ರಾ ಜಲಾಶಯದ ಒಳಹರಿವು ಒಂದು ಲಕ್ಷ ಕ್ಯುಸೆಕ್ಗೆ ಏರಿಕೆಯಾಗಿದ್ದು, ಅಷ್ಟೇ ಪ್ರಮಾಣದ ನೀರು ಭಾನುವಾರ ನದಿಗೆ ಹರಿಸುತ್ತಿರುವುದರಿಂದ ಮತ್ತೆ ಕಂಪ್ಲಿ–ಗಂಗಾವತಿ ಸೇತುವೆ ಮುಳುಗುವ ಭೀತಿ ಎದುರಾಗಿದೆ.
ಬೆಳಗಾವಿ ನಗರದ ಸಫಾರ್ ಗಲ್ಲಿಯಲ್ಲಿ ಮನೆಯ ಚಾವಣಿ ಕುಸಿದಿದ್ದು, ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 52 ಸೆಂ.ಮೀ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.